ಮೈಸೂರು: ಶಾಲೆಗಳಿಗೆ ಕೇಸರಿ ಶಾಲು ಹಾಕಿಕೊಂಡು ಬರುವಂತಿಲ್ಲ. ಕೇಸರಿ ಪೇಟಕ್ಕೂ ಕೂಡ ಅವಕಾಶ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು. ಈಗಾಗಲೇ ಸಾಂಪ್ರದಾಯಿಕವಾಗಿ ಅನುಸರಿಸುವ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು. ಹೊಸದಾಗಿ ಮಾಡುವಂತಿಲ್ಲ. ಮೊದಲಿನಿಂದ ಯಾವ ಪೇಟಗಳಿವೆ ಆ ಪೇಟಗಳಿಗಷ್ಟೇ ಅವಕಾಶ ನೀಡಲಾಗುವುದು ಎಂದರು.
ಹಿಜಾಬ್ಗೆ ಮಾತ್ರ ಅವಕಾಶ ಕೊಟ್ಟಿಲ್ಲ. ಜನಿವಾರ, ಶಿವಧಾರ ಪೇಟಕ್ಕೂ ಅವಕಾಶ ಕೊಟ್ಟಿದ್ದೇವೆ. ಆದರೆ ಹೊಸ ರೂಪದ ಪೇಟಕ್ಕೆ ಇಲ್ಲ. ಈಗ ಪೇಟಕ್ಕೆ ಬಣ್ಣದ ಬದಲಾವಣೆ ಮಾಡಿಕೊಂಡರೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹೈಕಮಾಂಡ್ ಕರೆದಿಲ್ಲ: ಹೈಕಮಾಂಡ್ ನನ್ನನ್ನು ಕರೆದಿಲ್ಲ. ಹೀಗಾಗಿ ಸದ್ಯಕ್ಕೆ ನಾನು ದೆಹಲಿಗೆ ಹೋಗುವುದಿಲ್ಲ. ಮೇ 15ರಂದು ದೆಹಲಿಗೆ ಹೋಗುತ್ತೇನೆಂದು ಹೇಳಿದವರು ಯಾರು? 15ರಂದೇ ಎಂಬ ನಿಶ್ಚಿತ ದಿನಾಂಕವನ್ನು ನೀವೇ ಯಾಕೆ ನಿಗದಿ ಮಾಡಿದ್ದೀರಾ. ಹೈಕಮಾಂಡ್ ಕರೆದಾಗ ಹೋಗುತ್ತೇನೆ ಎಂದರು. ಸಂಪುಟ ಪುನಾರಚಣೆ ಮಾಡುತ್ತೇನೆ. ಈ ಬಗ್ಗೆ ಚರ್ಚೆಗೆ ಹೈಕಮಾಂಡ್ ಕರೆದಾಗ ಹೋಗುತ್ತೇನೆ ಎಂದರು.
ತಾತ್ಕಾಲಿಕ ಪರಿಹಾರ: ಪ್ರಧಾನಿ ಮೋದಿ ಡೀಸಲ್ ಬಳಕೆ ಕಡಿತಗೊಳಿಸಲು ತಮ್ಮ ಬೆಂಗಾವಲನ್ನು ಕಡಿತಗೊಳಿಸಿದ್ದು ಈ ಬಗ್ಗೆ ಕರ್ನಾಟಕದಲ್ಲಿಯೂ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಪ್ರಧಾನಮಂತ್ರಿ ಬೆಂಗಾವಲು ಕಡಿತ ಮಾಡಿರುವುದು ತಾತ್ಕಾಲಿಕ ಪರಿಹಾರ ಅಷ್ಟೇ. ಬೇರೆ ರಾಜ್ಯಗಳು ಇದನ್ನ ಪಾಲಿಸುತ್ತಿದ್ದಾವ ಎಂಬುದನ್ನ ನಾನು ಗಮನಿಸುತ್ತೇನೆ. ಹಾಗಂತ ಇದು ಶಾಶ್ವತ ಪರಿಹಾರ ಅಲ್ಲ. ಕೇಂದ್ರ ಸರ್ಕಾರ ಬೇರೆ ದೇಶಗಳ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಬೇಕು. ಅದರ ಬಗ್ಗೆ ಕೇಂದ್ರ ಸರ್ಕಾರ ಆಸಕ್ತಿ ತೋರಿಸಲಿ ಎಂದು ಹೇಳಿದರು.
ಸಿಇಟಿಯನ್ನ ನಾನು ಜವಾಬ್ದಾರಿಯಾಗಿ ಮಾಡಿದ್ದೇವೆ. ಅಷ್ಟೇ ಜವಾಬ್ದಾರಿಯಿಂದ ಇವರು ನೀಟ್ ಪರೀಕ್ಷೆ ಮಾಡಬೇಕಿತ್ತು. ಇವರು ಮಕ್ಕಳ ಪರೀಕ್ಷೆಯನ್ನು ಹಾಳು ಮಾಡಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದರು.























