Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಭರವಸೆ ಹೊಮ್ಮಿಸುವ ಕಲಾವಿದರು ಹೆಚ್ಚಾಗಲಿ

ಭರವಸೆ ಹೊಮ್ಮಿಸುವ ಕಲಾವಿದರು ಹೆಚ್ಚಾಗಲಿ

0
22

ಬೆಂಗಳೂರು: ಕಲೆ ಎಂಬುದು ಮಹಾಸಾಗರ. ಕಲಿತದ್ದನ್ನು ಸಮರ್ಥವಾಗಿ ಹೊರ ಹೊಮ್ಮಿಸಿ ರಸಿಕರ ಮನಕ್ಕೆ ಮುದ ನೀಡುವವರು ಉತ್ತಮ ಕಲಾವಿದರಾಗಲು ಸಾಧ್ಯ ಎಂದು ಎಸ್ ವ್ಯಾಸ ವಿವಿಯ ಪ್ರೊ. ಕರುಣಾ ವಿಜೇಂದ್ರ ಹೇಳಿದರು.

ನಗರದ ಮಲ್ಲೇಶ್ವರಂ ವಯ್ಯಲಿ ಕಾವಲ್‌ನ ಪಾರ್ಕ್ ಬಡಾವಣೆಯಲ್ಲಿರುವ ಶ್ರೀ ಕೃಷ್ಣದೇವರಾಯ ಕಲಾ ಮಂದಿರದಲ್ಲಿ ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ಹಮ್ಮಿಕೊಂಡಿದ್ದ ‘ಉದಯೋನ್ಮುಖ ಪ್ರತಿಭೆ ಚಾರ್ವಿ ಶ್ರೀ ರೆಡ್ಡಿ ರಂಗಾರೋಹಣ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ವೇದಿಕೆಯಲ್ಲಿ ನೈಪುಣ್ಯ ಪ್ರದರ್ಶನ ಮಾಡುವ ಮುನ್ನ ಯುವ ಕಲಾವಿದರಿಗೆ ಧೈರ್ಯ ಬಹಳ ಮುಖ್ಯ. ನಿಜವಾದ ಕಲಿಕೆ ಹೊರಹೊಮ್ಮುವಿಕೆ ನಿಟ್ಟಿನಲ್ಲಿ ಭರವಸೆ ಇರಿಸಿಕೊಂಡಿದ್ದರೆ ಪ್ರದರ್ಶನ ಸಾರ್ಥಕವಾಗುತ್ತದೆ. ಇಂಥ ಕಲಾವಿದರ ಸಂಖ್ಯೆ ಹೆಚ್ಚಾಗಲಿ ಎಂದು ಅವರು ಆಶಿಸಿದರು.

ಗುರು ವಿದುಷಿ ಸುಪರ್ಣಾ ವೆಂಕಟೇಶ ಅವರ ಗರಡಿಯಲ್ಲಿ ಪಳಗುತ್ತಿರುವ ಆರ್.ಕೆ. ಶಿಲ್ಪಾ ಮತ್ತು ಚನ್ನ ಕೇಶವ ರೆಡ್ಡಿ ಅವರ ಪುತ್ರಿ ಚಾರ್ವಿಗೆ ನರ್ತನ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಇದೆ ಎಂದವರು ಹೇಳಿದರು.

ಕಲಾ ಅಭ್ಯಾಸದಿಂದ ದೂರವಾಗಬೇಡಿ: ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ವಿದ್ವಾನ್ ವಿನಯ್ ಶರ್ವ ಮಾತನಾಡಿ, ಶಾಲೆ ಮತ್ತು ಕಾಲೇಜು ಶಿಕ್ಷಣದ ನೆಪದಲ್ಲಿ ಸಂಗೀತ ಮತ್ತು ನೃತ್ಯ ಕಲಿಕೆಯಿಂದ ಯುವಜನರು ದೂರವಾಗಬಾರದು ಎಂದರು. ಪಠ್ಯಕ್ರಮದ ಅಭ್ಯಾಸಕ್ಕೆ ಕಲೆಗಳು ಪೂರಕವಾಗಿವೆ. ಇವೆರಡೂ ಜತೆಯಾಗಿಯೇ ಮುಂದುವರಿದರೆ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯವಿದೆ ಎಂದು ಅವರು ಅಭಿಪ್ರಾಯಿಸಿದರು. ಚಾರ್ವಿಶ್ರೀ ಪ್ರದರ್ಶನ ರಂಜನೀಯವಾಗಿದೆ. ಈಕೆ ಒಬ್ಬ ಭರವಸೆ ಕಲಾವಿದೆಯಾಗಿ ಬೆಳೆಯಲಿ ಎಂದು ಅವರು ಹಾರೈಸಿದರು.

ಎಚ್.ಎನ್. ಇಂಜಿನಿಯರಿಂಗ್ ಕಾಲೇಜು ಚೇರ್ಮನ್ ವೆಂಕಟಶಿವಾರೆಡ್ಡಿ, ಗುರು ಸುಪರ್ಣಾ ವೆಂಕಟೇಶ್, ಸಂಸ್ಥೆಯ ತಾಂತ್ರಿಕ ನಿರ್ದೇಶಕ ಸಾಯಿ ವೆಂಕಟೇಶ್ ಇತರರು ಹಾಜರಿದ್ದರು. ಅತಿಥಿಗಳು ಮತ್ತು ಹಿರಿಯ ವಿದ್ವಾಂಸರನ್ನು ಆರ್.ಕೆ. ಶಿಲ್ಪಾ ಮತ್ತು ಚನ್ನಕೇಶವ ರೆಡ್ಡಿ ದಂಪತಿ ಗೌರವಿಸಿದರು.

ನಂತರ ಚಾರ್ವಿ ಅವರು ಕಲಾ ಪ್ರದರ್ಶನದಲ್ಲಿ ಸಭಿಕರನ್ನು ರಂಜಿಸಿದರು. ನಟುವಾಂಗದಲ್ಲಿ ವಿದುಷಿ ಡಾ. ಸುಪರ್ಣಾ ವೆಂಕಟೇಶ್, ಗಾಯನದಲ್ಲಿ ವಿದ್ವಾನ್ ಬಾಲ ಸುಬ್ರಹ್ಮಣ್ಯ ಶರ್ಮಾ, ಕೊಳಲಿನಲ್ಲಿ ವಿದ್ವಾನ್ ರಘು ಸಿಂಹ, ವೀಣೆಯಲ್ಲಿ ವಿದ್ವಾನ್ ಪ್ರಶಾಂತ್ ಅವರ ಸಹಕಾರ ಪೂರಕವಾಗಿತ್ತು.