ರಾಜ್ಯದಲ್ಲಿ ಸೂರ್ಯನ ಪ್ರತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಜನತೆ ಬಿಸಿಲ ಬೇಗೆಗೆ ತತ್ತರಿಸಿ ಹೋಗಿದ್ದಾರೆ. ಆದರೆ ಈ ಸುಡುವ ಬಿಸಿಲಿನ ನಡುವೆಯೇ ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ತಂಪು ಸುದ್ದಿಯೊಂದನ್ನು ನೀಡಿದ್ದು, ಏಪ್ರಿಲ್ 21ರವರೆಗೆ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಏಪ್ರಿಲ್ 20ರವರೆಗೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಅಬ್ಬರವಿರಲಿದ್ದು, ಏಪ್ರಿಲ್ 21ರವರೆಗೆ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ಕೆಲವು ಜಿಲ್ಲೆಗಳಲ್ಲಿ ಮಳೆಯ ಜೊತೆಗೆ ಆಲಿಕಲ್ಲು ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದ್ದು, ಕೃಷಿಕರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಒಂದೆಡೆ ಮಳೆಯ ಮುನ್ಸೂಚನೆ ಇದ್ದರೂ, ಇನ್ನೊಂದೆಡೆ ರಾಜ್ಯದಾದ್ಯಂತ ತಾಪಮಾನದಲ್ಲಿ ಭಾರೀ ಏರಿಕೆ ಕಂಡುಬರುತ್ತಿದೆ. ರಾಜ್ಯದಲ್ಲಿ ಸದ್ಯ ಸಾಮಾನ್ಯಕ್ಕಿಂತ 1 ರಿಂದ 3 ಡಿಗ್ರಿ ಸೆಲ್ಸಿಯಸ್ವರೆಗೆ ಉಷ್ಣಾಂಶ ಹೆಚ್ಚಳವಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಾಪಮಾನವು 36 ರಿಂದ 37 ಡಿಗ್ರಿ ಸೆಲ್ಸಿಯಸ್ಗೆ ತಲುಪಿ ಜನರನ್ನು ಹೈರಾಣಾಗಿಸಿದೆ.
ಏಪ್ರಿಲ್ ತಿಂಗಳಲ್ಲೇ ಬಿಸಿಲಿನ ತಾಪ ಈ ಮಟ್ಟದಲ್ಲಿದ್ದರೆ, ಬರುವ ಮೇ ತಿಂಗಳಲ್ಲಿ ಸೂರ್ಯನ ಶಾಖ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಒಟ್ಟಿನಲ್ಲಿ ವರುಣನ ಸಿಂಚನಕ್ಕಾಗಿ ಕಾಯುತ್ತಿರುವ ಜನರಿಗೆ ಮಳೆ ಒಂದಷ್ಟು ನೆಮ್ಮದಿ ತಂದರೂ, ಭವಿಷ್ಯದ ಬಿಸಿಲಿನ ಏರಿಕೆ ಮಾತ್ರ ಆತಂಕಕಾರಿ ಮುನ್ಸೂಚನೆಯಾಗಿದೆ.























