ನಗರದ ಕೆಲ ಉದ್ಯೋಗಸ್ಥ ಮಹಿಳೆಯರು ರಾಜ್ಯ ಸರ್ಕಾರದ ಹೊಸ ಅಧಿಸೂಚನೆಯನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ. ಈ ಅಧಿಸೂಚನೆ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ತಿಂಗಳಿಗೆ ಒಂದು ದಿನ ವೇತನಸಹಿತ ರಜೆ ನೀಡುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಲಾತ್ತು.
ಈ ಸಂಬಂಧ, ನಗರದಲ್ಲಿ ನಿವಾಸಿಸುತ್ತಿರುವ ಆರ್.ವರ್ಷಾ ಸೇರಿದಂತೆ ಒಟ್ಟು 17 ಮಹಿಳೆಯರು ಸಲ್ಲಿಸಿದ ರಿಟ್ ಅರ್ಜಿಯನ್ನು ಹೈಕೋರ್ಟ್ನ ಏಕಸದಸ್ಯ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿಗೆ ವಿಚಾರಣೆಗೆ ನಿಗದಿಪಡಿಸಲಾಗಿದೆ. ಅರ್ಜಿದಾರರ ಪರ ಹೈಕೋರ್ಟ್ನ ಹಿರಿಯ ವಕೀಲೆ ಎಚ್.ಆರ್. ರೇಣುಕಾ ವಕಾಲತ್ತು ವಹಿಸಿದ್ದಾರೆ.
ಅರ್ಜಿಯಲ್ಲಿನ ಪ್ರಮುಖ ಆಕ್ಷೇಪಗಳು ಈ ಕೆಳಕಂಡಂತಿವೆ:
ಸಂವಿಧಾನ ಬದ್ಧತೆ ಮತ್ತು ಲಿಂಗ ಸಮಾನತೆ:
ಋತುಚಕ್ರದ ಸಮಯದಲ್ಲಿ ತಿಂಗಳಿಗೆ ಒಂದು ದಿನ ರಜೆ ನೀಡುವ ಆದೇಶವು ಸಂವಿಧಾನದ 14ನೇ ವಿಧಿಗೆ ವಿರುದ್ಧವಾಗಿದೆ. ಇದು ಲಿಂಗ ತಾರತಮ್ಯವನ್ನು ಉತ್ತೇಜಿಸುತ್ತದೆ ಮತ್ತು ಮಹಿಳೆಯರು ಪುರುಷರಿಗಿಂತ ‘ದುರ್ಬಲರು’ ಎಂಬ ಭಾವನೆಯನ್ನು ಉದ್ಯೋಗದಾತರಲ್ಲಿ ಮೂಡಿಸುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ.
ಉದ್ಯೋಗದ ಅವಕಾಶ ಮತ್ತು ವೃತ್ತಿಜೀವನದ ಮೇಲೆ ಪರಿಣಾಮ:
ಈ ಆದೇಶವು, ಮಹಿಳಾ ಉದ್ಯೋಗಿಗಳ ನೇಮಕಕ್ಕೆ ಹಾಗೂ ಬಡ್ತಿಗೆ ಕಂಪನಿಗಳು ಹಿಂದೇಟು ಹಾಕುವಂತೆ ಮಾಡುತ್ತದೆ. ತಿಂಗಳಿಗೆ ಒಂದು ದಿನ ಕಡ್ಡಾಯ ರಜೆ ನೀಡುವುದರಿಂದ ಸ್ಪರ್ಧಾತ್ಮಕ ವೃತ್ತಿಜೀವನದಲ್ಲಿ ಮಹಿಳೆಯರಿಗೆ ಹಿನ್ನಡೆ ಆಗುವ ಸಾಧ್ಯತೆಯಿದೆ.
ಉದ್ಯೋಗದಾತ ಮತ್ತು ಮಹಿಳಾ ಸಾಮರ್ಥ್ಯದ ಮೇಲೆ ಪರಿಣಾಮ:
ರಜೆಯಿಂದ ಉದ್ಯೋಗದಾತರಿಗೆ ಹೊರೆ ಹೆಚ್ಚುತ್ತದೆ. ಅದೇ ವೇಳೆ, ಮಹಿಳಾ ಉದ್ಯೋಗಿಗಳ ದಕ್ಷತೆ ಕಡಿಮೆಯಾಗುವ ಮತ್ತು ಅವರ ಸಬಲೀಕರಣಕ್ಕೂ ಅಡ್ಡಿಯಾಗುವ ಸಾಧ್ಯತೆಯಿದೆ. ಸರ್ಕಾರ ಈ ನೀತಿ ರೂಪಿಸುವಾಗ ಮಹಿಳೆಯರ ಅಭಿಪ್ರಾಯವನ್ನು ಪಡೆದುಕೊಳ್ಳದಿರುವುದು ಸಹಜ ನ್ಯಾಯತತ್ವದ ಉಲ್ಲಂಘನೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಆದ್ದರಿಂದ, ರಾಜ್ಯ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿದ ಅಧಿಸೂಚನೆ ರದ್ದುಪಡಿಸಬೇಕು ಎಂದು ಅವರು ಕೋರಿದ್ದಾರೆ.






















