ಕೊಪ್ಪಳ: ಕೌಟುಂಬಿಕ ಕಲಹಕ್ಕೆ ಬೇಸತ್ತ ಮಹಿಳೆಯೋರ್ವಳು ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲಬುರ್ಗಾ ತಾಲೂಕಿನ ಮಾರನಾಳ ಗ್ರಾಮದಲ್ಲಿ ಗುರುವಾರ ನಡೆದಿದೆ.
35 ವರ್ಷದ ಬಾಳವ್ವ ಕುರಿ ತಮ್ಮ ಇಬ್ಬರು ಮಕ್ಕಳಾದ ಹುಲಿಗೆಮ್ಮ (9) ಮತ್ತು ವಿಜಯಲಕ್ಷ್ಮಿ (8) ಜೊತೆ ಗ್ರಾಮದ ಹೊರ ವಲಯದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಶವಗಳನ್ನು ಹೊರತೆಗೆದಿದ್ದಾರೆ.
ಮೃತ ಮಹಿಳೆಯ ತವರು ಮನೆಯವರು ಪತಿಯ ಕಿರುಕುಳ ಕಾರಣದಿಂದಲೇ ಆಕೆ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಯಲಬುರ್ಗಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತಂತೆ ಪೊಲೀಸರು ತನಿಖೆ ನಡೆಸಿದ್ದಾರೆ.























