ಕೊಪ್ಪಳ: ಹಿಂದುತ್ವ ರಕ್ಷಣೆ ಮಾಡುತ್ತೇವೆಂದು ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ರಾಮಮಂದಿರ ಲೂಟಿ ಮಾಡುತ್ತಿದೆ. ಘಜ್ನಿ ಮಹಮ್ಮದ್, ಘೋರಿ ಮಹಮ್ಮದ್ ಸೋಮನಾಥ ದೇವಸ್ಥಾನ ಲೂಟಿ ಮಾಡಿದ್ದರು. ಅವರಿಗೂ ಬಿಜೆಪಿಯವರಿಗೂ ಏನೂ ವ್ಯತ್ಯಾಸ ಇಲ್ಲ, ಅವರಂತೆ ಈಗ ಲೂಟಿ ಮಾಡುತ್ತಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಗಂಭೀರ ಆರೋಪ ಮಾಡಿದರು.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರು ಹಿಂದುತ್ವದ ಮುಖವಾಡ ಹಾಕಿಕೊಂಡಿರುವರಷ್ಟೆ, ಇದು ಕೇವಲ ದೇಣಿಗೆ ಲೂಟಿ ಅಲ್ಲ. ರಾಮಮಂದಿರ ಕಟ್ಟುವುದಕ್ಕೆ ಕೊಟ್ಟ ಹಣದಲ್ಲೂ ಲೂಟಿಯಾಗಿದೆ. ಹಣ ಲೂಟಿ ಮಾಡಿ ಬಿಜೆಪಿಯವರು, ಆರ್ಎಸ್ಎಸ್, ವಿಶ್ವ ಹಿಂದೂ ಪರಿಷತ್ನವರು ಶ್ರೀಮಂತರಾಗಿದ್ದಾರೆ. ಮೋದಿಯವರು ಯಾಕೆ ತನಿಖೆ ಮಾಡುತ್ತಿಲ್ಲ. ಸುಪ್ರೀಂ ಕೋರ್ಟ್ ಮಾನಿಟರಿಂಗ್ನಿಂದ ಇದು ತನಿಖೆ ಆಗಬೇಕು. ಜನರ ಬಗ್ಗೆ ಮಾತಾಡುವುದಕ್ಕೆ ಬಿಜೆಪಿಯವರಿಗೆ ನೈತಿಕ ಹಕ್ಕು ಇಲ್ಲ. ಮೋದಿ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದರು.
ಆರ್ಎಸ್ಎಸ್ ನೋಂದಣಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಿಯಾಂಕ್ ಹೇಳಿದ್ದು ಸರಿ ಇದೆ. ಅದು ಒಂದು ಸಂಸ್ಥೆ ನೋಂದಣಿಯಾದರೆ ತಪ್ಪೇನು. ಆರ್ಎಸ್ಎಸ್ನವರದು ದೇಶದ್ಯಾಂತ ಸಂಘಟನೆ ಇದೆ. ಅವರು ಬ್ಯಾನ್ ಮಾಡಿ ಎಂದು ಹೇಳಿಲ್ಲ. ಅವರಿಗೆ ದೇಶಪ್ರೇಮ ಇಲ್ಲ, ದೇಶದ ಸಂವಿಧಾನ ಸ್ವೀಕಾರ ಮಾಡಿಲ್ಲ. ಹೀಗಾಗಿ ಅವರಿಗೆ ನಿಯತ್ತೂ ಇಲ್ಲ. ನಾವು ಆರ್ಎಸ್ಎಸ್ ಸಂಘಟನೆ ಮೇಲೆ ನಂಬಿಕೆ ಮಾಡುವುದಕ್ಕೆ ಆಗುವುದಿಲ್ಲ ಎಂದರು.






















