Home ನಮ್ಮ ಜಿಲ್ಲೆ ಮೈಸೂರು ತಿ. ನರಸೀಪುರ ಮೈಸೂರು ರೇಷ್ಮೆ ಕಾರ್ಖಾನೆ ಮುಚ್ಚುವ ಪ್ರಶ್ನೆಯೇ ಇಲ್ಲ

ತಿ. ನರಸೀಪುರ ಮೈಸೂರು ರೇಷ್ಮೆ ಕಾರ್ಖಾನೆ ಮುಚ್ಚುವ ಪ್ರಶ್ನೆಯೇ ಇಲ್ಲ

0
ತಿ. ನರಸೀಪುರ ಮೈಸೂರು ರೇಷ್ಮೆ ಕಾರ್ಖಾನೆ ಮುಚ್ಚುವ ಪ್ರಶ್ನೆಯೇ ಇಲ್ಲ

ರೇಷ್ಮೆ ಕಾರ್ಖಾನೆ ಅಭಿವೃದ್ಧಿಗೆ ಸರ್ಕಾರ ಬದ್ಧ: ಕ್ರೀಡಾಂಗಣ ಜಾಗ ಆದೇಶ ಮರುಪರಿಶೀಲನೆ – ಸಚಿವರ ಸ್ಪಷ್ಟನೆ

ಮೈಸೂರು: ತಿ.ನರಸೀಪುರದಲ್ಲಿರುವ ಮೈಸೂರು ರೇಷ್ಮೆ ಕಾರ್ಖಾನೆಯನ್ನು ಮುಚ್ಚಲಾಗುತ್ತದೆ ಎಂಬ ವದಂತಿಗಳಿಗೆ ತೆರೆ ಎಳೆದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, “ಕಾರ್ಖಾನೆಯನ್ನು ಮುಚ್ಚುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು. ರೇಷ್ಮೆ ಮಾರುಕಟ್ಟೆಗೆ ಮೀಸಲಿಟ್ಟಿದ್ದ ಹಾಗೂ ಇದುವರೆಗೂ ಬಳಸಲಾಗದ ಸುಮಾರು ಒಂದೂವರೆ ಎಕರೆ ಜಾಗವನ್ನು ಕ್ರೀಡಾಂಗಣ ನಿರ್ಮಾಣಕ್ಕೆ ಬಳಸುವ ಬಗ್ಗೆ ಮಾತ್ರ ಪ್ರಾಥಮಿಕ ತೀರ್ಮಾನ ಕೈಗೊಳ್ಳಲಾಗಿತ್ತು. “ಈ ಆದೇಶವನ್ನೂ ಈಗ ಮರುಪರಿಶೀಲಿಸಲಾಗುತ್ತದೆ,” ಎಂದು ಹೇಳಿದರು.

ಸಂಯುಕ್ತ ಕರ್ನಾಟಕ ಯೂಟ್ಯೂಬ್ ಚಾನೆಲ್‌ನಲ್ಲಿ ಮೈಸೂರು ಸಿಲ್ಕ್ ಸೀರೆಗಳ ಕಾರ್ಖಾನೆ ಜಾಗದಲ್ಲಿ ಕ್ರೀಡಾಂಗಣಕ್ಕೆ ಆದೇಶ ನೀಡಿದ ಬಗ್ಗೆ ವಿವರವಾದ ಮೈಸೂರು ಸಿಲ್ಕ್ ಸೀರೆ: ನಾರಿಯರಿಗೆ ಇನ್ನು ಕನಸು? ಎಂಬ ದೃಶ್ಯ ಪ್ರಸಾರದ ಮೂಲಕ ಮೈಸೂರು ರೇಷ್ಮೆ ಕಾರ್ಖಾನೆ ಕುರಿತಂತೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿತ್ತು.

ವಿಡಿಯೋ ಲಿಂಕ್‌:  Mysore Silk Saree Lovers SHOCKED | Karnataka Govt Big Move in T Narasipura

ಇದನ್ನೂ ಓದಿ: KIADB ಸ್ಥಳಾಂತರ ಸ್ಥಗಿತ: ಪಾಟೀಲರ ನಿರ್ಧಾರಕ್ಕೆ ಜೋಶಿ ಅಭಿನಂದನೆ

ಕಾರ್ಖಾನೆಗೆ ಧಕ್ಕೆ ಬಂದರೆ ಕ್ರೀಡಾಂಗಣ ಬೇಡ : “ರೇಷ್ಮೆ ಕಾರ್ಖಾನೆಗೆ ಯಾವುದೇ ತೊಂದರೆ ಉಂಟಾದರೆ ಆ ಜಾಗದಲ್ಲಿ ಕ್ರೀಡಾಂಗಣ ಮಾಡುವುದಿಲ್ಲ. ನಮಗೆ ರೇಷ್ಮೆ ಕಾರ್ಖಾನೆ ಮುಖ್ಯ. ಸರ್ಕಾರಕ್ಕೆ ಈ ವಿಚಾರದಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ,” ಎಂದು ಸಚಿವರು ಸ್ಪಷ್ಟಪಡಿಸಿದರು.

ಕಾರ್ಖಾನೆಯ ಕಾರ್ಮಿಕರು ಮತ್ತು ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು. ರೇಷ್ಮೆ ಕಾರ್ಖಾನೆಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ಅದಕ್ಕೆ ಕುಂದು ಬಾರದಂತೆ ಕಾಪಾಡುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.

ಇದನ್ನೂ ಓದಿ: ನೇಮಕಾತಿ ಪ್ರಕ್ರಿಯೆ ಹಳೇ ಪದ್ಧತಿಯಲ್ಲೇ ಮುಂದುವರಿಕೆ: ಜಾರಕಿಹೊಳಿ

ರಾಜಕೀಯ ಆರೋಪ: ಈ ವಿಚಾರದಲ್ಲಿ ಬಿಜೆಪಿ ರಾಜಕೀಯಕ್ಕಾಗಿ ಗೊಂದಲ ಸೃಷ್ಟಿಸುತ್ತಿದೆ ಎಂದು ಸಚಿವರು ದೂರಿದರು. ವಿಚಾರದ ಸಂಪೂರ್ಣ ಮಾಹಿತಿ ಇಲ್ಲದೆ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಅಧಿಕಾರ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯೆ ಇಲ್ಲ: ರಾಜ್ಯದಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆ ಚರ್ಚೆಗಳ ಕುರಿತು ಕೇಳಿದ ಪ್ರಶ್ನೆಗೆ, “ನಾನು ಯಾರ ಬಗ್ಗೆ ಅಥವಾ ಯಾವುದರ ಬಗ್ಗೆ ಮಾತನಾಡುವುದಿಲ್ಲ. ನನ್ನ ಬಗ್ಗೆ ಯಾರೇ ಏನೇ ಹೇಳಿಕೆ ನೀಡಿದರೂ ಪ್ರತಿಕ್ರಿಯಿಸುವುದಿಲ್ಲ. ಪಕ್ಷದ ವಿಚಾರವನ್ನು ಹೈಕಮಾಂಡ್ ತೀರ್ಮಾನಿಸುತ್ತದೆ,” ಎಂದು ಹೇಳಿದರು.

ಇದನ್ನೂ ಓದಿ: ಕೆಡಿಪಿ ಸಭೆಯಲ್ಲಿ ಗದ್ದಲ: ಸಭೆಯಿಂದ ಹೊರನಡೆದ ಶಾಸಕ ಸತೀಶ್ ಸೈಲ್

ಸಚಿವ ಮಹದೇವಪ್ಪ ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೂಡ ಸ್ಪಷ್ಟನೆ ನೀಡಿದ್ದು, ರೇಷ್ಮೆ ಕಾರ್ಖಾನೆ ಸ್ಥಳಾಂತರ ಅಥವಾ ಮುಚ್ಚುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಜಾಗ ಬಳಕೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಮೊದಲು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಕಾರ್ಮಿಕರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.