ರಾಯಚೂರು: ದೇಶದ ಏಕೈಕ ಚಿನ್ನ ಉತ್ಪಾದನಾ ಸಂಸ್ಥೆಯಾದ ಹಟ್ಟಿ ಚಿನ್ನದ ಗಣಿ (HGML) ಮುಖ್ಯ ಪ್ರವೇಶ ದ್ವಾರದ ಮುಂಭಾಗದಲ್ಲಿ 16 ಸ್ಪೋಟಕ ವಸ್ತುಗಳು ಪತ್ತೆಯಾಗಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಗಣಿಗೆ ಪ್ರವೇಶಿಸುವ ದ್ವಾರದ ಸಮೀಪವೇ ಈ ಹಾನಿಕಾರಕ ವಸ್ತುಗಳು ಬಿದ್ದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಘಟನೆ ತಿಳಿಯುತ್ತಿದ್ದಂತೆಯೇ ಗಣಿಯ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ.
ಪ್ರಾಥಮಿಕ ಪರಿಶೀಲನೆ ಏನು ಹೇಳುತ್ತದೆ?: ಕಂಪನಿಯ ಮೂಲಗಳು ಹಾಗೂ ಪೊಲೀಸ್ ಮೂಲಗಳ ಪ್ರಕಾರ, ಪತ್ತೆಯಾದ ಸ್ಪೋಟಕ ವಸ್ತುಗಳು ಕಂಪನಿಗೆ ಸೇರಿದ ಅಧಿಕೃತ ಸ್ಪೋಟಕ ಸಾಮಗ್ರಿಗಳಲ್ಲ ಎಂಬುದು ಪ್ರಾಥಮಿಕ ಪರಿಶೀಲನೆಯಲ್ಲಿ ತಿಳಿದುಬಂದಿದೆ. ಯಾರೋ ಬೈಕ್ನಲ್ಲಿ ಸ್ಪೋಟಕ ವಸ್ತುಗಳನ್ನು ಸಾಗಿಸುತ್ತಿದ್ದಾಗ ಅವು ಕೆಳಗೆ ಬಿದ್ದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಆದರೆ ಇದು ಅಜಾಗರೂಕತೆಯಿಂದ ನಡೆದದ್ದೋ ಅಥವಾ ಉದ್ದೇಶಪೂರ್ವಕವಾಗಿ ಎಸೆಯಲ್ಪಟ್ಟದ್ದೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: ಹೋಳಿ ಮುನ್ನ FSSAI ದಾಳಿ: ಆಹಾರ ಕಲಬೆರಕೆ ವಿರುದ್ಧ ಕಠಿಣ ಕ್ರಮ
ಈ ಹಿನ್ನೆಲೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿಯುತ್ತಿದೆ.
ಪೊಲೀಸ್ ಕ್ರಮ: ಹಟ್ಟಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಟ್ಟಿ ಚಿನ್ನದ ಗಣಿ ಕಂಪನಿಯ ಭದ್ರತಾ ಅಧಿಕಾರಿ ಮಾನಯ್ಯ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಹಟ್ಟಿ ಪೊಲೀಸ್ ಠಾಣೆಯ ಪಿಐ ಶಿವಾನಂದ ಗಾಣಿಗೇರ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಪಾಸಣೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ನಲ್ಲಿ ವಿನಯ ಕುಲಕರ್ಣಿಗೆ ಬಿಗ್ ರಿಲೀಫ್
ಕಾರ್ಮಿಕರು ಮತ್ತು ಸಾರ್ವಜನಿಕರಲ್ಲಿ ಆತಂಕ: ಈ ಘಟನೆ ನಂತರ ಗಣಿಯ ಕಾರ್ಮಿಕರು ಹಾಗೂ ಪಟ್ಟಣದ ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಂಪನಿ ಆಡಳಿತವು ಕಾರ್ಮಿಕರಿಗೆ ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿ, ಭದ್ರತಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದು ಭರವಸೆ ನೀಡಿದೆ.
ಪೊಲೀಸರು ಪತ್ತೆಯಾದ 16 ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಂಡು ಫೊರೆನ್ಸಿಕ್ ಪರೀಕ್ಷೆಗೆ ಕಳುಹಿಸಿದ್ದಾರೆ. ಅವು ಯಾವ ಪ್ರಕಾರದವು, ಎಲ್ಲಿ ತಯಾರಿಸಲ್ಪಟ್ಟವು ಎಂಬುದರ ಕುರಿತು ವರದಿ ನಿರೀಕ್ಷೆಯಲ್ಲಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಯಾವುದೇ ಸ್ಫೋಟ ಸಂಭವಿಸಿಲ್ಲ ಹಾಗೂ ಹಾನಿ ಉಂಟಾಗಿಲ್ಲ. ಆದಾಗ್ಯೂ, ಭದ್ರತಾ ದೃಷ್ಟಿಯಿಂದ ಗಣಿಯ ಪ್ರವೇಶದ್ವಾರದಲ್ಲಿ ತಾತ್ಕಾಲಿಕವಾಗಿ ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಲಾಗಿದೆ.























