ಗುರುವೈಭವೋತ್ಸವ ವೇದಿಕೆಯಲ್ಲಿ ಸನ್ಮಾನ, ‘ರಾಯರ ಪಾದಕ್ಕೆ ಅರ್ಪಣೆ’ ಎಂದ ನಟ
ರಾಯಚೂರು: ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ನಡೆದ ಗುರುವೈಭವೋತ್ಸವ ಕಾರ್ಯಕ್ರಮ ಭಕ್ತಿಭಾವದ ನಡುವೆ ನೆರವೇರಿತು. ಈ ಸಂದರ್ಭದಲ್ಲಿ ಹಲವಾರು ಗಣ್ಯರಿಗೆ ಸನ್ಮಾನ ಮಾಡಲಾಗಿದ್ದು, ನಟ ರಾಘವೇಂದ್ರ ರಾಜ್ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.
ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಅವರಿಂದ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಜೊತೆಗೆ ‘ರಾಯರ ಅನುಗ್ರಹ ಪ್ರಶಸ್ತಿ’ಯನ್ನೂ ನೀಡಿ ಗೌರವಿಸಲಾಯಿತು. ಅಮೆರಿಕದ ಫ್ಲೋರಿಡಾ ಮೂಲದ ಅಮೆರಿಕದ ಫ್ಲೋರಿಡಾದ ಯೋಗ ಸಂಸ್ಕೃತಂ ವಿಶ್ವವಿದ್ಯಾಲಯದಿಂದ ವತಿಯಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ಕುಮಾರ್ ಅವರು ಕುಟುಂಬ ಸಮೇತರಾಗಿ ಭಾಗವಹಿಸಿದರು.
ಇದನ್ನೂ ಓದಿ: ರಣಜಿ ಫೈನಲ್: ಜಮ್ಮು–ಕಾಶ್ಮೀರಕ್ಕೆ ಆರಂಭಿಕ ಆಘಾತ
‘ಡಾಕ್ಟರೇಟ್ ಪದವಿ ರಾಯರ ಪಾದಕ್ಕೆ ಅರ್ಪಣೆ’: ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್, “ಡಾಕ್ಟರೇಟ್ ಪದವಿ ಸಿಕ್ಕಿದ್ದು ನನ್ನ ಪಾಲಿಗೆ ದೊಡ್ಡ ಪುಣ್ಯ. ಅದನ್ನು ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ಅರ್ಪಿಸುತ್ತೇನೆ. ನಾನು ಹುಟ್ಟಿದಾಗ ತಂದೆ ಮಂತ್ರಾಲಯ ಸಿನಿಮಾ ಮಾಡುತ್ತಿದ್ದರು. ಅದರಿಂದಲೇ ನನಗೆ ರಾಘವೇಂದ್ರ ಎಂಬ ಹೆಸರು ಇಟ್ಟರು. ಅದು ರಾಘವೇಂದ್ರ ರಾಜ್ಕುಮಾರ್ ಆಗಿ ಬೆಳೆದಿದೆ,” ಎಂದು ಭಾವುಕರಾಗಿ ಹೇಳಿದರು.
“ಈ ಗೌರವದಿಂದ ಜವಾಬ್ದಾರಿ ಹಾಗೂ ಭಯ ಹೆಚ್ಚಾಗಿದೆ. ನಾನು ಏನು ಸಾಧನೆ ಮಾಡಿದ್ದೇನೆ ಎಂಬ ಪ್ರಶ್ನೆ ಮನಸ್ಸಿಗೆ ಬರುತ್ತದೆ. ದೇವರ ಆಶೀರ್ವಾದದಿಂದಲೇ ಈ ಗೌರವ ದೊರೆತಿದೆ. ಮುಂದಿನ ದಿನಗಳಲ್ಲಿ ಸಮಾಜ ಸೇವೆಯಲ್ಲಿ ತೊಡಗಿ ಜನರ ಜೊತೆ ಬೆರೆತು ಕೆಲಸ ಮಾಡುತ್ತೇನೆ,” ಎಂದರು.
ಇದನ್ನೂ ಓದಿ: ಧಾರವಾಡದಲ್ಲಿ ಉಗ್ರಗೊಂಡ ಉದ್ಯೋಗಾಕಾಂಕ್ಷಿಗಳ ಹೋರಾಟ: ಸಚಿವರ ಭಾವಚಿತ್ರಗಳಿಗೆ ಚಪ್ಪಲಿ ಸೇವೆ
ಚಿತ್ರರಂಗದ ಪಯಣ: 60 ವರ್ಷ ವಯಸ್ಸಿನ ರಾಘವೇಂದ್ರ ರಾಜ್ಕುಮಾರ್ 1988ರಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ ಜನಮನ ಗೆದ್ದಿದ್ದಾರೆ. ನಿರ್ಮಾಪಕರಾಗಿಯೂ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ. 2004ರ ಬಳಿಕ ಸುಮಾರು 15 ವರ್ಷಗಳ ಕಾಲ ಚಿತ್ರರಂಗದಿಂದ ವಿರಾಮ ಪಡೆದಿದ್ದ ಅವರು, ಇದೀಗ ಮತ್ತೆ ಪೋಷಕ ಪಾತ್ರಗಳ ಮೂಲಕ ಸಿನಿಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.























