ರಾಯಚೂರು: ಕಳೆದ 75 ವರ್ಷಗಳಲ್ಲಿ ದಲಿತ ಮುಖ್ಯಮಂತ್ರಿಯನ್ನು ಮಾಡಲು ಕಾಂಗ್ರೆಸ್ ಪಕ್ಷದಲ್ಲಿ ಅವಕಾಶವಿರಲಿಲ್ಲವೇ ಎಂದು ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಭಾನುವಾರ ಮಂತ್ರಾಲಯದಲ್ಲಿ ನಡೆಯುತ್ತಿರುವ ಗುರುವೈಭವೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ದೇ ಸಿದ್ದರಾಮಯ್ಯನವರು. ಮಲ್ಲಿಕಾರ್ಜುನ ಖರ್ಗೆ ಹಾಗೂ ಪರಮೇಶ್ವರ ಅವರು ಎಂದೋ ಸಿಎಂ ಆಗಬೇಕಿತ್ತು ಎಂದರು.
ಅವರನ್ನು ಅಲ್ಲಿಂದ ಖಾಲಿ ಮಾಡಿಸಿ, ಹುತ್ತಿನಲ್ಲಿ ಹೋಗಿ ಸೇರಿಕೊಂಡವರೇ ಸಿದ್ದರಾಮಯ್ಯನವರು. ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯರನ್ನು ಕರೆದುಕೊಂಡು ಹೋದವರು ಏನಾಗಿದ್ದಾರೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: IPL 2026: ಧೋನಿ ಅಭಿಮಾನಿಗಳಿಗೆ ಗುಡ್ನ್ಯೂಸ್
ದಲಿತರು ಯಾವತ್ತೋ ಸಿಎಂ ಆಗಬೇಕಿತ್ತು. ಖರ್ಗೆಯವರಿಗೆ ಈಗ ಸಿಎಂ ಆಗಲು ಸಾಧ್ಯವೇ. ಹಾಗೇ ಹೇಳಿಯೇ ಅವರನ್ನು ಡೆಲ್ಲಿಗೆ ಕಳುಹಿಸಿದ್ದರು. ಈಗ ದಲಿತರನ್ನು ಸಿಎಂ ಮಾಡುತ್ತಾರಾ ಎಂದು ಸವಾಲು ಹಾಕಿದರು.
ಮುಖ್ಯಮಂತ್ರಿ ಆಗಬೇಕು ಮುಖ್ಯಮಂತ್ರಿ ಆಗಬೇಕು ಅಂತ ಒದ್ದಾಡುತ್ತಿದ್ದಾರಲ್ಲ ಎಂದು ಡಿಕೆಶಿಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಅವರನ್ನು ಗಮನಿಸಿದರೆ, ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎನ್ನುಸುತ್ತಿದೆ. ನಾನು ರಣಹೇಡಿ ಅಲ್ಲ, ನಾನು ಎಲ್ಲದಕ್ಕೂ ಸಿದ್ಧವಾಗಿದ್ದೇನೆ. ಹೋರಾಟ ಮಾಡುತ್ತೇನೆ ಎನ್ನುತ್ತಿದ್ದಾರೆ. ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡುವುದಾಗಿದ್ದರೆ ಯಾವುತ್ತೋ ಕೊಡಬಹುದಿತ್ತು ಎಂದು ಹೇಳಿದರು.






















