ಮಹಾರಾಷ್ಟ್ರದ ವಾರ್ಧಾ ಸಮೀಪದ ಸಿಂದಿ ರೈಲು ನಿಲ್ದಾಣದ ಬಳಿ ಮಂಗಳವಾರ ಬೆಳಿಗ್ಗೆ ನವದೆಹಲಿ–ತಾಂಬರಂ ಜಿಟಿ ಎಕ್ಸ್ಪ್ರೆಸ್ ರೈಲಿನ ಹಿಂಭಾಗದ ಕೋಚ್ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಆದರೆ, ಈ ಘಟನೆಯಲ್ಲಿ ಯಾವುದೇ ಸಾವುನೋವು ಅಥವಾ ಗಾಯಗಳಿಲ್ಲ ಎಂದು ಕೇಂದ್ರ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ರೈಲು ಸಿಂದಿ ರೈಲು ನಿಲ್ದಾಣದ ಮೂಲಕ ಹಾದುಹೋಗುತ್ತಿದ್ದು, ನಿಲ್ದಾಣದ ಉಪ ಸೂಪರಿಂಟೆಂಡೆಂಟ್ ಹಿಂಭಾಗದ ಗಾರ್ಡ್ ಕೋಚ್ನಿಂದ ಹೊಗೆ ಹೊರಬರುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ವಾಕಿ-ಟಾಕಿ ಮೂಲಕ ಸಿಬ್ಬಂದಿಗೆ ಮಾಹಿತಿ ನೀಡಿ ರೈಲನ್ನು ನಿಲ್ಲಿಸುವಂತೆ ಸೂಚನೆ ನೀಡಲಾಯಿತು.
ಇದನ್ನೂ ಓದಿ: ಇಮ್ರಾನ್ ಖಾನ್ ಆರೋಗ್ಯಕ್ಕೆ ಜಾಗತಿಕ ಕ್ರಿಕೆಟ್ ದಿಗ್ಗಜರ ಬೆಂಬಲ
ಸಕಾಲದಲ್ಲಿ ಕ್ರಮ – ತಪ್ಪಿದ ದೊಡ್ಡ ಅನಾಹುತ: ರೈಲು ಸಂಖ್ಯೆ 12616 New Delhi – Tambaram ಜಿಟಿ ಎಕ್ಸ್ಪ್ರೆಸ್ ಬೆಳಿಗ್ಗೆ ಸುಮಾರು 11.20ರ ಸುಮಾರಿಗೆ ಸಿಂದಿ ಮತ್ತು ತುಲ್ಜಾಪುರ ನಿಲ್ದಾಣಗಳ ನಡುವೆ ನಿಲ್ಲಿಸಲಾಯಿತು. ರೈಲ್ವೆ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದಾಗಿ ಪ್ರಯಾಣಿಕರನ್ನು ತಕ್ಷಣವೇ ಇತರ ಕೋಚ್ಗಳಿಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಇದರಿಂದ ಭಾರೀ ಅನಾಹುತ ಸಂಭವಿಸುವುದನ್ನು ತಪ್ಪಿಸಲು ಸಾಧ್ಯವಾಯಿತು.
ಹಾನಿಗೊಂಡ ಬೋಗಿ ಬೇರ್ಪಡೆ : ಘಟನೆಯ ನಂತರ ರೈಲ್ವೆ ಅಧಿಕಾರಿಗಳು ಬೆಂಕಿ ಕಾಣಿಸಿಕೊಂಡ ಕೋಚ್ ಅನ್ನು ಉಳಿದ ಬೋಗಿಗಳಿಂದ ಬೇರ್ಪಡಿಸಿದರು. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದರು. ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನು ಎಂಬುದರ ಕುರಿತು ತನಿಖೆ ನಡೆಯುತ್ತಿದ್ದು, ತಾಂತ್ರಿಕ ದೋಷ ಅಥವಾ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ: ಕೋಲಾರ: ದೇಶದ ಮೊದಲ ಟಾಟಾ–ಎರ್ಬಸ್ ಹೆಲಿಕಾಪ್ಟರ್ ಘಟಕಕ್ಕೆ ಇಂದು ಐತಿಹಾಸಿಕ ಚಾಲನೆ
ಪ್ರಯಾಣಿಕರಲ್ಲಿ ನೆಮ್ಮದಿ: ಘಟನೆ ಬಳಿಕ ಪ್ರಯಾಣಿಕರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ರೈಲ್ವೆ ಸಿಬ್ಬಂದಿಯ ಸಮಯೋಚಿತ ಕ್ರಮದಿಂದ ಎಲ್ಲರೂ ಸುರಕ್ಷಿತವಾಗಿರುವುದು ಪ್ರಯಾಣಿಕರಲ್ಲಿ ನೆಮ್ಮದಿ ಮೂಡಿಸಿದೆ. ರೈಲ್ವೆ ಇಲಾಖೆ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಾಂತ್ರಿಕ ಪರಿಶೀಲನೆ ಮತ್ತು ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವುದಾಗಿ ತಿಳಿಸಿದೆ.






















