‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಗೆ IVIG ಥೆರಪಿ ಸೇರ್ಪಡೆ: ಬಡ ಮತ್ತು ಮಧ್ಯಮ ವರ್ಗಕ್ಕೆ ದೊಡ್ಡ ಆಸರೆ
ಬೆಂಗಳೂರು: ರಾಜ್ಯದಲ್ಲಿ ಗಿಲೆನ್–ಬಾರಿ ಸಿಂಡ್ರೋಮ್ (GBS) ಎಂಬ ಗಂಭೀರ ನರಮಂಡಲದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ದುಬಾರಿ ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಗಿಲೆನ್–ಬಾರಿ ಸಿಂಡ್ರೋಮ್ ಚಿಕಿತ್ಸೆಯಲ್ಲಿ ಅತ್ಯಂತ ಪ್ರಮುಖವಾಗಿರುವ ಹಾಗೂ ದುಬಾರಿಯಾಗಿರುವ ‘ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್’ (IVIG) ಚಿಕಿತ್ಸೆಯನ್ನು ಇದೀಗ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ (AB PMJAY–CM’s ArK) ಯೋಜನೆಯ ವ್ಯಾಪ್ತಿಗೆ ತರಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಕಾಗಿನೆಲೆ ತಿಂಥಣಿ ಕನಕ ಗುರುಪೀಠದ ಸ್ವಾಮೀಜಿ ಇನ್ನಿಲ್ಲ
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನಿಂದ ಸುತ್ತೋಲೆ: ಈ ಸಂಬಂಧ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ನೂತನ ಸುತ್ತೋಲೆ ಹೊರಡಿಸಲಾಗಿದ್ದು, ಅದರಂತೆ ಗಿಲೆನ್–ಬಾರಿ ಸಿಂಡ್ರೋಮ್ ರೋಗಿಗಳಿಗೆ ಉಚಿತ IVIG ಚಿಕಿತ್ಸೆ ನೀಡಲು ಅಧಿಕೃತ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ.
ನಿರ್ಧಾರದ ಪ್ರಮುಖ ಅಂಶಗಳು: ಸರ್ಕಾರದ ಈ ಮಹತ್ವದ ತೀರ್ಮಾನದ ಪ್ರಮುಖ ಅಂಶಗಳು ಹೀಗಿವೆ
ಇದನ್ನೂ ಓದಿ: ಚಾಮರಾಜ ವಿಧಾನಸಭಾ ಕ್ಷೇತ್ರ ನಂದು: ಸಿಂಹ ಗುಡುಗು
ಉಚಿತ ಚಿಕಿತ್ಸೆ: ಈವರೆಗೆ ಲಭ್ಯವಿದ್ದ ಮೂಲ ಚಿಕಿತ್ಸೆಯ ಜೊತೆಗೆ ಈಗ IVIG ಥೆರಪಿಯನ್ನು ‘ಹೆಚ್ಚುವರಿ ಪ್ಯಾಕೇಜ್’ ಆಗಿ ಉಚಿತವಾಗಿ ಒದಗಿಸಲಾಗುತ್ತದೆ.
ಚಿಕಿತ್ಸಾ ವೆಚ್ಚದ ಮಿತಿ: ಪ್ರತಿ ರೋಗಿಗೆ ಗರಿಷ್ಠ ₹2 ಲಕ್ಷದವರೆಗೆ IVIG ಚಿಕಿತ್ಸೆಯ ಸೌಲಭ್ಯ ಉಚಿತವಾಗಿ ಲಭ್ಯವಿರುತ್ತದೆ.
ಎಲ್ಲಾ ಆಸ್ಪತ್ರೆಗಳಲ್ಲೂ ಸೌಲಭ್ಯ: ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸಾ ಸೌಲಭ್ಯ ದೊರೆಯಲಿದೆ.
ಪಾರದರ್ಶಕ ವ್ಯವಸ್ಥೆ: ಸೌಲಭ್ಯದ ದುರುಪಯೋಗ ತಡೆಯಲು ಹಾಗೂ ಅರ್ಹ ರೋಗಿಗಳಿಗೆ ಮಾತ್ರ ಚಿಕಿತ್ಸೆ ತಲುಪಿಸುವ ಉದ್ದೇಶದಿಂದ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನೀಡಲಾಗಿದೆ.
ಇದನ್ನೂ ಓದಿ: ಅಂಕಣ ಬರಹ: ಗನ್ ಸಂಸ್ಕೃತಿ ಅಟ್ಟಹಾಸದಲ್ಲಿ ಬಳ್ಳಾರಿಗೆಲ್ಲಿದೆ ನೆಮ್ಮದಿ?
ಬಡ ಮತ್ತು ಮಧ್ಯಮ ವರ್ಗಕ್ಕೆ ದೊಡ್ಡ ಆಸರೆ: ಸಾವಿರಾರು ರೂಪಾಯಿ ವೆಚ್ಚವಾಗುವ IVIG ಚಿಕಿತ್ಸೆಯನ್ನು ಉಚಿತವಾಗಿ ಒದಗಿಸುವ ಮೂಲಕ ಬಡ ಹಾಗೂ ಸಾಮಾನ್ಯ ವರ್ಗದ ರೋಗಿಗಳ ಬದುಕಿಗೆ ಆಸರೆಯಾಗುವುದು ಸರ್ಕಾರದ ಬದ್ಧತೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ನಿರ್ಧಾರದಿಂದ ಗಿಲೆನ್–ಬಾರಿ ಸಿಂಡ್ರೋಮ್ನಿಂದ ಬಳಲುತ್ತಿರುವ ಅನೇಕ ರೋಗಿಗಳು ಆರ್ಥಿಕ ಸಂಕಷ್ಟವಿಲ್ಲದೆ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ.























