ದಾಂಡೇಲಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ವಸತಿ ಮತ್ತು ಕೃಷಿ ಮಾಡಿ ಜೀವನೋಪಾಯ ಮಾಡುತ್ತಿರುವ ಬಡ ಕುಟುಂಬಗಳ ಬಗರ್ ಹುಕುಂ ಸಾಗುವಳಿಯ ಸಮಸ್ಯೆಗೆ ಪರಿಹಾರ ಕಲ್ಪಿಸುವ ಹಿನ್ನಲೆಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಜಿಲ್ಲಾಡಳಿತಕ್ಕೆ ಒತ್ತುವರಿ ಜಾಗೆಯ ಮಹಜರು ಪತ್ರ ಪೂರೈಸಲು ಮತ್ತು ವಿಚಾರಣ ವರದಿ ಸಲ್ಲಿಸಲು ಸೂಚನೆ ನೀಡಿದೆ.
ಈ ಕುರಿತು ಚಂದ್ರಕಾಂತ ಕೋಚರೆಕರ ನೇತ್ರತ್ವದ ಹೋರಾಟ ಸಮಿತಿಯ ನಿಯೋಗ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರನ್ನು ಭೇಟಿಯಾಗಿ ಅಭಿನಂದಿಸಿ, ಅರಣ್ಯ ಹಕ್ಕು ಪ್ರಕ್ರಿಯೆಯಲ್ಲಿ ಎದುರಾಗಬಹುದಾದ ಕೆಲವು ಲೋಪ ದೋಷಗಳನ್ನು ನಿವಾರಿಸಲು ಮನವಿ ಮಾಡಿದರು. ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ವಿವಿಧ ರಚನಾತ್ಮಕ ಸಲಹೆಗಳನ್ನು ಮಂಡಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಭೂಮಿ ಸಾಗುವಳಿದಾರರ ಹಿತರಕ್ಷಣೆ ಮಾಡುವಂತೆ ಹೋರಾಟ ಸಮಿತಿಯ ನಿಯೋಗ ಇತ್ತೀಚಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ನಿಯೋಗ ನೀಡಿದ ಕೆಲವು ರಚನಾತ್ಮಕ ಸಲಹೆ ಮತ್ತು ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದು, ಈ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದು, ಮುಖ್ಯ ಕಾರ್ಯದರ್ಶಿಗಳು ಉನ್ನತಾಧಿಕಾರಿಗಳ ಸಭೆ ನಡೆಸಿ ಬಗರ್ ಹುಕುಂ ಅರಣ್ಯ ಭೂ ಸಾಗುವಳಿದಾರರ ಹಿತರಕ್ಷಣೆಗೆ ಪೂರಕ ನಿರ್ಣಯ ತೆಗೆದುಕೊಂಡಿರುವುದನ್ನು ಹೋರಾಟ ಸಮಿತಿ ಸ್ವಾಗತಿಸಿದೆ.
ಈ ಮಹತ್ವದ ನಿರ್ಧಾರದಿಂದ ಜಿಲ್ಲೆಯ 73 ಸಾವಿರ ಕ್ಲೇಮು ಅರ್ಜಿಗಳ ಅರಣ್ಯ ಭೂಮಿ ಹಕ್ಕು ವಿಚಾರಣಾ ಪ್ರಕ್ರಿಯೆ ಪೂರ್ಣಗೊಳ್ಳಲು ಹೆಚ್ಚಿನ ಸಮಯ ತಗಲಬಹುದಾದರೂ ಮುಂದಿನ ದಿನಗಳಲ್ಲಿ ಜಿಲ್ಲೆಯ ಅರಣ್ಯವಾಸಿಗಳ ಬದುಕಿಗೆ ಭದ್ರತೆ ಒದಗಿಸುವ ಕೆಲಸ ಆಗಬಹುದೆನ್ನುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.