SK Home Ad
Home ನಮ್ಮ ಜಿಲ್ಲೆ ಮೈಸೂರು ಇನ್ಸ್‌ಪೆಕ್ಟರ್ ತಪ್ಪು ಮಾಡಿಲ್ಲ, ಆದರೆ ಬುದ್ಧಿವಾದದ ದಾಟಿ ಸ್ವಲ್ಪ ಬದಲಾಗಿದೆ

ಇನ್ಸ್‌ಪೆಕ್ಟರ್ ತಪ್ಪು ಮಾಡಿಲ್ಲ, ಆದರೆ ಬುದ್ಧಿವಾದದ ದಾಟಿ ಸ್ವಲ್ಪ ಬದಲಾಗಿದೆ

0
55

ಮೈಸೂರು: ಕೋಮು ಗಲಭೆ ಆಗುವುದನ್ನೇ ಅವರು ಕಾಯುತ್ತಾರೆ. ಕೋಮುಗಲಭೆ ಆಗಬೇಕು ಯಾರದ್ದಾದರು ಸಾವಾಗಬೇಕು ಅದರ ಲಾಭ ಪಡೆಯಬೇಕು. ಇದು ಬಿಜೆಪಿಯವರ ಪ್ಲ್ಯಾನ್. ಬಿಜೆಪಿಯವರು ರಣ ಹದ್ದುಗಳು ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಕಡೆ ಕೋಮು ಗಲಭೆಯಾದರು ಅದರ ಚುನಾವಣಾ ಲಾಭ ಬಿಜೆಪಿಗೆ ಆಗಿದೆ. ಹೀಗಾಗಿ ಬಿಜೆಪಿಗೆ ಕೋಮು ಗಲಭೆ ಬಗ್ಗೆ ಬಿಜೆಪಿಗೆ ಆಸಕ್ತಿ ಜಾಸ್ತಿ. ನರಸೀಪುರದಲ್ಲಿ ಅದೇ ಕೆಲಸ ಮಾಡಲು ಬಂದಿದ್ದಾರೆ. ಪ್ರತಿಭಟನೆ ಮೆರವಣಿಗೆ ಏನಾದರು ಮಾಡಲಿ ಬಿಡಿ ಎಂದರು.

ಪಟಾಕಿ ಹೊಡೆಯುವುದು ಸರಿ ಅಲ್ಲ, ಮಸೀದಿ ಮುಂದೆ ಯಾಕೆ ಪಟಾಕಿ ಹೊಡೆಯಬೇಕು. ನಮ್ಮ ದೇವಸ್ಥಾನದ ಮುಂದೆ ಅವರು ಬಂದು ಪಟಾಕಿ ಹೊಡೆದರೆ ನಾವು ಸುಮ್ಮನೆ ಇರುವುದಿಲ್ಲ. ಚರ್ಚ್, ಮಸೀದಿ ದೇವಸ್ಥಾನ ಮುಂದೆ ಪಟಾಕಿ ಹೊಡೆಯಬಹುದು ಎಂದು ಎಲ್ಲಿದೆ ಕಾನೂನು. ಯಾರೇ ತಪ್ಪು ಮಾಡಿದರು ತಪ್ಪೇ. ಇದು ಎಲ್ಲಾ ಧರ್ಮದವರಿಗೂ ಅನ್ವಯವಾಗಲಿದೆ. ಅನುಮತಿ ಪಡೆದು ಮೆರವಣಿಗೆಗೆ ಹೋಗಬೇಕು. ಈ ನಿಯಮ ಎಲ್ಲಾ ಧರ್ಮಕ್ಕೆ ಅನ್ವಯವಾಗುತ್ತದೆ ಎಂದರು.

ನರಸೀಪುರದಲ್ಲಿ ಅವರು ಯಾವ ರಸ್ತೆಗಾದರು ಹೋಗಲಿ. ಅನುಮತಿ ಪಡೆದು ಹೋಗಲಿ. ಅನುಮತಿ ಪಡೆದರೆ ಭದ್ರತೆ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಇನ್ಸ್‌ಪೆಕ್ಟರ್ ತಪ್ಪು ಮಾಡಿಲ್ಲ: ಟಿ. ನರಸೀಪುರ ಇನ್ಸ್‌ಪೆಕ್ಟರ್ ಯಾವ ತಪ್ಪು ಮಾಡಿಲ್ಲ. ಅವರು ಬುದ್ಧಿವಾದ ಮಾತ್ರ ಹೇಳಿದ್ದಾರೆ. ಬುದ್ಧಿವಾದದ ದಾಟಿ ಸ್ವಲ್ಪ ಬದಲಾಗಿದೆ. ಇದನ್ನು ಬಿಟ್ಟು ಇನ್ಸ್‌ಪೆಕ್ಟರ್ ಯಾವ ತಪ್ಪು ಮಾಡಿಲ್ಲ. ತಪ್ಪು ಮಾಡದೆ ಇರುವ ಇನ್ಸ್‌ಪೆಕ್ಟರ್ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳಬೇಕು. ಅನುಮತಿ ಇಲ್ಲದೆ ಅವರಿಗೆ ಬೇಕಾದಂತಹ ರಸ್ತೆಗಳಿಗೆ ಹೋಗಲು ಬಿಡಲು ಆಗುವುದಿಲ್ಲ. ಅನುಮತಿ ಪಡೆಯದೆ ಅವರಿಗೆ ಬೇಕಾದ ರಸ್ತೆಯಲ್ಲಿ ಮೆರವಣಿಗೆ ಹೋಗಿ ಏನಾದರು ಹೆಚ್ಚು-ಕಡಿಮೆಯಾದರೆ ಯಾರು ಹೊಣೆ. ಅದನ್ನೇ ಇನ್ಸ್‌ಪೆಕ್ಟರ್ ಹೇಳಿದ್ದಾರೆ. ಅದರಲ್ಲಿ ಯಾವ ತಪ್ಪು ಇಲ್ಲ. ಇನ್ಸ್‌ಪೆಕ್ಟರ್ ಬುದ್ಧಿ ಹೇಳಿರುವುದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.