ಹೊಸಪೇಟೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಗೆ ಮೂರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ, ವಿಶ್ವವಿಖ್ಯಾತ ಹಂಪಿಯ ಐತಿಹಾಸಿಕ ಕಲ್ಲಿನ ತೇರಿಗೆ ಪಿಂಕ್ ಲೈಟ್ ದೀಪಾಲಂಕಾರ ಮಾಡಲಾಗಿದೆ.
ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮೀ ಯೋಜನೆಗೆ ಮೂರು ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಐತಿಹಾಸಿಕ ಹಾಗೂ ಪ್ರಮುಖ ಸ್ಮಾರಕಗಳಿಗೆ ಪಿಂಕ್ ಲೈಟ್ ಅಲಂಕಾರ ಮಾಡುವಂತೆ ಸರ್ಕಾರ ಸೂಚಿಸಿದೆ.
ಸರ್ಕಾರದ ಆದೇಶದಂತೆ ವಿಜಯನಗರ ಜಿಲ್ಲೆಯ ವಿಶ್ವವಿಖ್ಯಾತ ಹಂಪಿಯ ಪ್ರಮುಖ ಸ್ಮಾರಕವಾದ ಕಲ್ಲಿನ ತೇರಿಗೆ ಗುಲಾಬಿ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ.
ರಾತ್ರಿ ವೇಳೆ ಪಿಂಕ್ ಲೈಟ್ಗಳ ಬೆಳಕಿನಲ್ಲಿ ಕಲ್ಲಿನ ತೇರು ಕಂಗೊಳಿಸಿದ್ದು, ಹಂಪಿಗೆ ಆಗಮಿಸಿದ್ದ ಪ್ರವಾಸಿಗರ ಗಮನ ಸೆಳೆಯಿತು. ಬಣ್ಣಬಣ್ಣದ ಬೆಳಕಿನಲ್ಲಿ ಕಂಗೊಳಿಸಿದ ಐತಿಹಾಸಿಕ ಸ್ಮಾರಕವನ್ನು ಪ್ರವಾಸಿಗರು ಕಣ್ತುಂಬಿಕೊಂಡು ಸಂಭ್ರಮಿಸಿದರು.
ವಿಶ್ವ ಪಾರಂಪರಿಕ ತಾಣವಾಗಿರುವ ಹಂಪಿಯ ಕಲ್ಲಿನ ತೇರು, ಗೃಹಲಕ್ಷ್ಮೀ ಯೋಜನೆಯ ಮೂರು ವರ್ಷಗಳ ಸಂಭ್ರಮಕ್ಕೆ ವಿಶೇಷ ರೀತಿಯಲ್ಲಿ ಸಾಕ್ಷಿಯಾಯಿತು.






















