ಮಲೇಬೆನ್ನೂರು: ಮಲೆನಾಡಿನಲ್ಲಿ ನಿರಂತರ ಮಳೆಯಿಂದ ತುಂಗಾ ಜಲಾಶಯ ಭರ್ತಿಯಾಗಿದೆ. ಸಮೀಪದ ಉಕ್ಕಡಗಾತ್ರಿ ಸ್ನಾನಘಟ್ಟ ಮುಳುಗಡೆಯಾಗಿದೆ. ಜಲಾಶಯ ಸುರಕ್ಷತೆಗಾಗಿ 30 ಸಾವಿರ ಕ್ಯೂಸೆಕ್ ನೀರು ತುಂಗಭದ್ರಾ ನದಿಗೆ ಬಿಟ್ಟಿರುವುದರಿಂದ ತುಂಬಿ ಹರಿಯುತ್ತಿದೆ.
ಬಹುತೇಕ ಅಂಗಡಿ ಮುಗ್ಗಟ್ಟುಗಳು ಜಲಾವೃತಗೊಂಡಿವೆ. ಅಜ್ಜಯ್ಯನ ಭಕ್ತರು ಸ್ನಾನ ಘಟ್ಟದಲ್ಲಿ ಸ್ನಾನ ಮಾಡಿ ನದಿ ತಟದಲ್ಲಿ ತಮ್ಮ ನಂಬಿಕೆ, ಭಕ್ತಿ ಅನುಸಾರ ಪೂಜೆ-ಪುನಸ್ಕಾರಗಳನ್ನು ಸಲ್ಲಿಸುವ ಪದ್ಧತಿ ಇದ್ದು, ಸದ್ಯಕ್ಕೆ ಜಲಾವೃತದಿಂದ ನಿಂತಿದೆ.
ಜನ-ಜಾನುವಾರುಗಳು ನದಿ ಕಡೆಗೆ ತೆರಳದಂತೆ ಗ್ರಾಮಾಡಳಿತ ಮತ್ತು ಶ್ರೀ ಕರಿಬಸವೇಶ್ವರ ಅಜ್ಜಯ್ಯನ ಗದ್ದಿಗೆ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಗೆ ಮುನ್ಸೂಚನೆ ನೀಡಲಾಗಿದೆ. ಅಜ್ಜಯ್ಯನ ದರ್ಶನಕ್ಕೆ ಬರುವ ಭಕ್ತರು ನದಿಗೆ ಇಳಿದು ಸ್ನಾನ ಮಾಡದಿರಲು ಟ್ರಸ್ಟ್ ವತಿಯಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ನಿರಂತರ ಜಿಟಿ ಜಿಟಿ ಮಳೆ ಬರುತ್ತಿರುವುದರಿಂದ ತುಂಗಾ ಜಲಾಶಯಕ್ಕೆ 32 ಸಾವಿರ ಕ್ಯೂಸೆಕ್ ನೀರಿನ ಒಳಹರಿವಿದೆ. ತುಂಗಾ ಜಲಾಶಯದಿಂದ ಇನ್ನಷ್ಟು ಹೆಚ್ಚಿನ ನೀರು ತುಂಗಭದ್ರಾ ನದಿಗೆ ಹರಿದರೆ ತದಿ ತಟದ ಗ್ರಾಮಗಳು, ತೋಟಗಳು, ಇತರೆ ಬೆಳೆಗಳಿಗೆ ಅಪಾಯ ಸಂಭವಿಸಬಹುದು ಎಂಬ ಆತಂಕವೂ ರೈತರಿಗಿದೆ.






















