ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕನೋರ್ವ ಅದೇ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯೊಂದಿಗೆ ಲವ್ವಿಡವ್ವಿಯಲ್ಲಿ ತೊಡಗಿದ ವಿಷಯ ತನಿಖೆಗೆ ಕುಲಸಚಿವರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ಕುಲಪತಿ ಪ್ರೊ. ಎ.ಎಂ. ಖಾನ್ ರಚಿಸಿದ್ದಾರೆ.
ವಿದ್ಯಾರ್ಥಿಗಳೊಂದಿಗೆ ಪ್ರಾಧ್ಯಾಪಕರ ಈ ರೀತಿಯ ಅನುಚಿತ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕವಿವಿ, ಸಂಶೋಧನಾ ವಿದ್ಯಾರ್ಥಿ ವೇದವ್ಯಾಸ ಚೌವ್ಹಾಣ ನೀಡಿದ ದೂರಿನ ಆಧಾರದ ಮೇಲೆ ಶನಿವಾರ ಮಧ್ಯಾಹ್ನ ಮೊದಲ ಹಂತದ ವಿಚಾರಣೆಯನ್ನೂ ನಡೆಸಿತು. ಆದರೆ, ದೂರು ನೀಡಿದ ವಿದ್ಯಾರ್ಥಿ ಅನ್ಯ ಕೆಲಸದ ನಿಮಿತ್ತ ಊರಿಗೆ ತೆರಳಿದ ಹಿನ್ನೆಲೆಯಲ್ಲಿ ಪುನಃ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ಶನಿವಾರದ ವಿಚಾರಣೆ ಸಂದರ್ಭದಲ್ಲಿ ಲವ್ವಿಡವ್ವಿ ಪ್ರಾಧ್ಯಾಪಕ ಪ್ರೊ. ದೇವರಾಜ ತಂಗುದೊರೈ ಅವರನ್ನು ಕರೆಯಿಸಲಾಗಿದ್ದು, ಅವರಿಂದಲೂ ಎಲ್ಲಾ ಆಯಾಮಗಳಲ್ಲಿ ವಿವರಣೆಯನ್ನು ಪಡೆಯಲಾಗಿದೆ. ಇದಲ್ಲದೇ ವಿದ್ಯಾರ್ಥಿ ದೂರಿನೊಂದಿಗೆ ಪ್ರಾಧ್ಯಾಪಕ ವಿದ್ಯಾರ್ಥಿನಿಯೊಂದಿಗಿದ್ದ ಭಾವಚಿತ್ರ ಮತ್ತು ಆಕೆಯ ಬಗೆಗೆ ಮಾತನಾಡಿದ ಆಡಿಯೋ ತುಣುಕುಗಳನ್ನು ನೀಡಿದ್ದು, ಅವುಗಳನ್ನು ಪರಿಶೀಲಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾತನಾಡಿದ ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್, “ಈಗಾಗಲೇ ಕುಲಸಚಿವರ ನೇತೃತ್ವದಲ್ಲಿ ಮೊದಲ ಹಂತದ ವಿಚಾರಣೆ ಶನಿವಾರ ನಡೆಸಲಾಗಿದೆ. ಎರಡು-ಮೂರು ದಿನಗಳಲ್ಲಿಯೇ ವಿಚಾರಣೆಯನ್ನು ಪೂರ್ಣಗೊಳಿಸಿ ಆರೋಪ ಸಾಬೀತಾದರೆ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು” ಎಂದು ಹೇಳಿದರು.





















