ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಉಪಾಧ್ಯಕ್ಷ’ ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ, ಇದೀಗ ಅವರು ನಾಯಕನಾಗಿ ನಟಿಸಿರುವ ಎರಡನೇ ಚಿತ್ರ ‘ಲಕ್ಷ್ಮೀಪುತ್ರ’ ಬಿಡುಗಡೆಗೆ ಸಜ್ಜಾಗಿದೆ. ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಲ್ಲಿ ಇಡೀ ಚಿತ್ರತಂಡ ಒಂದೆಡೆ ಸೇರಿ ಹಬ್ಬವನ್ನು ಆಚರಿಸುವುದರ ಜೊತೆಗೆ, ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.
ನವೆಂಬರ್ 27ರಂದು ‘ಲಕ್ಷ್ಮೀಪುತ್ರ’ ಸಿನಿಮಾ ತೆರೆಗೆ
ಚಿತ್ರದ ಬಿಡುಗಡೆ ಕುರಿತು ಮಾಹಿತಿ ಹಂಚಿಕೊಂಡ ನಟ ಚಿಕ್ಕಣ್ಣ, “ಕನ್ನಡ ರಾಜ್ಯೋತ್ಸವದ ಸಂಭ್ರಮದ ತಿಂಗಳಾದ ನವೆಂಬರ್ 27ರಂದು ಸಿನಿಮಾ ರಾಜ್ಯಾದ್ಯಂತ ತೆರೆಕಾಣಲಿದೆ. ನನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿ ಗಣೇಶೋತ್ಸವ ಮತ್ತು ರಾಜ್ಯೋತ್ಸವದ ವೇದಿಕೆಗಳೇ ನನ್ನ ಬದುಕಿಗೆ ಆಸರೆಯಾಗಿದ್ದವು. ಅದೇ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷವಾಗಿದ್ದು, ಪ್ರೇಕ್ಷಕರು ಎಂದಿನಂತೆ ಪ್ರೀತಿ ಮತ್ತು ಪ್ರೋತ್ಸಾಹ ನೀಡಿ ಚಿತ್ರವನ್ನು ಹರಸಬೇಕು” ಎಂದು ಮನವಿ ಮಾಡಿದರು.
ಮಂಡ್ಯದ ಸೊಗಡಿನ ಸಿನಿಮಾ
ಚಿತ್ರದ ಕಥಾಹಂದರದ ಬಗ್ಗೆ ವಿವರಿಸಿದ ನಿರ್ಮಾಪಕ ಎ.ಪಿ. ಅರ್ಜುನ್, “ಲಕ್ಷ್ಮಿ ಎಂದ ತಕ್ಷಣ ಮೊದಲು ನೆನಪಾಗುವುದು ತಾಯಿ, ಆ ನಂತರ ಅಕ್ಕ-ತಂಗಿ ಹಾಗೂ ಬಾಳಸಂಗಾತಿ. ಮಂಡ್ಯದ ಸೊಗಡಿನಲ್ಲಿ ಸಾಗುವ ಈ ಸಿನಿಮಾ, ತಾಯಿ-ಮಗನ ನಡುವಿನ ಭಾವನಾತ್ಮಕ ಬಾಂಧವ್ಯದ ಜೊತೆಗೆ ಆರಂಭದಿಂದ ಕೊನೆಯವರೆಗೂ ಭರ್ಜರಿ ಹಾಸ್ಯ ಮತ್ತು ಆಪ್ತವಾದ ಪ್ರೇಮಕಥೆಯನ್ನು ಒಳಗೊಂಡಿದೆ” ಎಂದು ತಿಳಿಸಿದರು. ನಾಯಕಿ ವಂದಿತಾ ಗೌಡ ಮಾತನಾಡಿ, ಸಿನಿಮಾ ಅತ್ಯುತ್ತಮವಾಗಿ ಮೂಡಿಬಂದಿದ್ದು, ಪ್ರೇಕ್ಷಕರ ಪ್ರೋತ್ಸಾಹವೇ ಕಲಾವಿದರ ಬೆಳವಣಿಗೆಗೆ ಶ್ರೀರಕ್ಷೆ ಎಂದರು.
ಈ ಚಿತ್ರಕ್ಕೆ ವಿಜಯ್ ಎಸ್. ಸ್ವಾಮಿ ನಿರ್ದೇಶನ ಮಾಡಿದ್ದು, ಎ.ಪಿ. ಅರ್ಜುನ್ ಅವರ ಕಥೆ, ಚಿತ್ರಕಥೆ ಹಾಗೂ ಸಾಹಿತ್ಯವಿದೆ. ಅನ್ನಪೂರ್ಣ ಎ.ಪಿ. ಅರ್ಜುನ್ ನಿರ್ಮಾಣದ ಈ ಚಿತ್ರದಲ್ಲಿ ತಾರಾ ಅನುರಾಧ, ಕುರಿ ಪ್ರತಾಪ್, ಧರ್ಮಣ್ಣ ಕಡೂರು ಮತ್ತು ಮಿತ್ರ ಸೇರಿದಂತೆ ದೊಡ್ಡ ತಾರಾಗಣವಿದೆ. ಕೌಟುಂಬಿಕ ಹಾಗೂ ಹಾಸ್ಯಮಯ ಕಥಾಹಂದರ ಹೊಂದಿರುವ ‘ಲಕ್ಷ್ಮೀಪುತ್ರ’ ನವೆಂಬರ್ 27ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ.






















