ಮೈಸೂರಿನ ಎಂಜಿ ರಸ್ತೆ ತರಕಾರಿ ಮಾರುಕಟ್ಟೆಯಲ್ಲಿ ಎಫ್ಎಸ್ಎಸ್ಎಐ ಅಧಿಕಾರಿಗಳು ನಡೆಸಿದ ದಿಢೀರ್ ತಪಾಸಣೆಯಲ್ಲಿ 106 ಕೆಜಿ ಕೃತಕ ಬಣ್ಣ ಬಳಿದ ಹಸಿರು ಬಟಾಣಿ ವಶಪಡಿಸಿಕೊಳ್ಳಲಾಗಿದೆ. ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ಮೈಸೂರು: ನಗರದ ಎಂಜಿ ರಸ್ತೆಯಲ್ಲಿರುವ ಪ್ರಮುಖ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಅಧಿಕಾರಿಗಳು ಇತ್ತಿಚೆಗೆ ನಡೆಸಿದ ವಿಶೇಷ ತಪಾಸಣೆಯಲ್ಲಿ ಕೃತಕ ಬಣ್ಣ ಬಳಿದು ಮಾರಾಟಕ್ಕೆ ಇಡಲಾಗಿದ್ದ 106 ಕೆಜಿ ಹಸಿರು ಬಟಾಣಿಯನ್ನು ವಶಪಡಿಸಿಕೊಂಡಿದ್ದಾರೆ.
ಎಫ್ಎಸ್ಎಸ್ಎಐನ ನಿಯೋಜಿತ ಅಧಿಕಾರಿ ಎಸ್.ಎಲ್. ರವೀಂದ್ರ ಅವರ ನೇತೃತ್ವದಲ್ಲಿ ಬೆಳ್ಳಂ ಬೆಳಿಗ್ಗೆ ಆರಂಭವಾದ ಕಾರ್ಯಾಚರಣೆಯಲ್ಲಿ ಆರು ವ್ಯಾಪಾರಿಗಳ ಬಳಿಯಿದ್ದ ಶಂಕಿತ ಬಣ್ಣದ ಬಟಾಣಿಯನ್ನು ಪರಿಶೀಲಿಸಲಾಯಿತು. ಬಳಿಕ ಅವುಗಳನ್ನು ವಶಪಡಿಸಿಕೊಂಡು, ಪ್ರಯೋಗಾಲಯ ಪರೀಕ್ಷೆಗೆ ಒಂದು ಶಾಸನಬದ್ಧ ಮಾದರಿ ಹಾಗೂ ಮೂರು ಸಮೀಕ್ಷಾ ಮಾದರಿಗಳನ್ನು ಸಂಗ್ರಹಿಸಿ ಕಳುಹಿಸಲಾಗಿದೆ.
ಏಕೆ ಬಣ್ಣ ಬಳಿಯುತ್ತಾರೆ? : ಕೆಲವು ವ್ಯಾಪಾರಿಗಳು ದೀರ್ಘಕಾಲ ಸಂಗ್ರಹಿಸಿದ ಅಥವಾ ಒಣಗಿದ ಹಸಿರು ಬಟಾಣಿಗೆ ಮತ್ತೆ ತಾಜಾತನದ ಹಸಿರು ಬಣ್ಣ ಕಾಣುವಂತೆ ಮಾಡಲು ಕೃತಕ ಬಣ್ಣ ಬಳಿಯುತ್ತಿರುವುದು ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ. ಇದರಿಂದ ಗ್ರಾಹಕರು ಬಟಾಣಿ ಹೊಸದಾಗಿದೆ ಎಂಬ ಭಾವನೆ ಹೊಂದುವ ಸಾಧ್ಯತೆ ಇದ್ದು, ಇದು ಗ್ರಾಹಕರನ್ನು ದಾರಿ ತಪ್ಪಿಸುವ ಕ್ರಮವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮನೆಯಲ್ಲೇ ಹೀಗೆ ಪರೀಕ್ಷಿಸಬಹುದು : ಎಸ್.ಎಲ್. ರವೀಂದ್ರ ಅವರ ಪ್ರಕಾರ, ಶಂಕಿತ ಹಸಿರು ಬಟಾಣಿಯನ್ನು ಪಾರದರ್ಶಕ ಪಾತ್ರೆಯಲ್ಲಿರುವ ನೀರಿನಲ್ಲಿ ಹಾಕಿ ನಿಧಾನವಾಗಿ ಕಲಕಿದಾಗ ನೀರು ಹಸಿರು ಬಣ್ಣಕ್ಕೆ ತಿರುಗಿದರೆ, ಬಟಾಣಿಯ ಮೇಲೆ ಬಾಹ್ಯ ಕೃತಕ ಬಣ್ಣ ಬಳಕೆಯಾಗಿರುವ ಸಾಧ್ಯತೆ ಇರುತ್ತದೆ. ಇಂತಹ ಉತ್ಪನ್ನಗಳನ್ನು ಖರೀದಿಸುವಾಗ ಗ್ರಾಹಕರು ಎಚ್ಚರಿಕೆ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.
ವ್ಯಾಪಾರಿಗಳಿಗೆ ಅರಿವು ಮೂಡಿಸಿದ ಅಧಿಕಾರಿಗಳು : ಕಾರ್ಯಾಚರಣೆಯ ವೇಳೆ ಸುಮಾರು 25ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಅನಧಿಕೃತ ಬಣ್ಣದ ಬಳಕೆಯಿಂದ ಉಂಟಾಗುವ ಆರೋಗ್ಯದ ಅಪಾಯಗಳು ಹಾಗೂ ಆಹಾರ ಸುರಕ್ಷತಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ನಿಯಮ ಉಲ್ಲಂಘನೆ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳಾದ ಗಿರೀಶ್ ಎಸ್.ಆರ್. (ವೃತ್ತ-1), ರಾಜೇಶ್ (ವೃತ್ತ-2) ಹಾಗೂ ಬಾಲಸುಬ್ರಹ್ಮಣ್ಯ (ವೃತ್ತ-3) ಭಾಗವಹಿಸಿ ತಪಾಸಣೆ ನಡೆಸಿದರು.
ಗ್ರಾಹಕರಿಗೆ ಸಲಹೆ : ಆಹಾರ ಸುರಕ್ಷತಾ ತಜ್ಞರ ಪ್ರಕಾರ, ಅಸಹಜವಾಗಿ ಗಾಢ ಹಸಿರು ಬಣ್ಣ ಹೊಂದಿರುವ ಬಟಾಣಿಯನ್ನು ಖರೀದಿಸುವ ಮುನ್ನ ಪರಿಶೀಲಿಸುವುದು ಉತ್ತಮ. ಬಣ್ಣ ಬಿಡುವ ಲಕ್ಷಣ ಕಂಡುಬಂದರೆ ಬಳಸದೇ, ಸಂಬಂಧಿತ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಗುಣಮಟ್ಟದ ಹಾಗೂ ವಿಶ್ವಾಸಾರ್ಹ ಮಾರಾಟಗಾರರಿಂದ ಮಾತ್ರ ತರಕಾರಿ ಖರೀದಿಸುವಂತೆ ಗ್ರಾಹಕರಿಗೆ ಸಲಹೆ ನೀಡಲಾಗಿದೆ.
ಮೂಲ: ಎಫ್ಎಸ್ಎಸ್ಎಐ ಅಧಿಕಾರಿಗಳ ಮಾಹಿತಿ ಹಾಗೂ ಎಫ್ಎಸ್ಎಸ್ಎಐ ಅಧಿಕೃತ ಸಾಮಾಜಿಕ ಜಾಲತಾಣ ಪ್ರಕಟಣೆ.






















