ಹುಬ್ಬಳ್ಳಿ: ಬಂಗಾರವಿದೆ ಎಂದು ನಂಬಿಸಿ ‘ಸೋನೆ ಕಾ ಮಿಟ್ಟಿ’ (ಬಂಗಾರದ ಬೂದಿ ಮಣ್ಣು) ಹೆಸರಿನಲ್ಲಿ ವ್ಯಾಪಾರಿಯೊಬ್ಬರಿಗೆ ಭಾರಿ ವಂಚನೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ದುರ್ಗದ ಬಯಲಿನಲ್ಲಿರುವ ‘ಓಂ ಡೈಮಂಡ್ ಜ್ಯುವೆಲರ್ಸ್’ ಅಂಗಡಿಯ ವ್ಯಾಪಾರಿ ಮಂಟುಕುಮಾರ ಡೋಲುಯ ಎಂಬುವವರಿಗೆ ಹರಿಯಾಣ ಮೂಲದ ಪರಿಚಿತ ಮುಕೇಶ ಹಾಗೂ ಆತನೊಂದಿಗೆ ಬಂದಿದ್ದ ಇಬ್ಬರು ವೃದ್ಧರು ವಂಚಿಸಿದ್ದಾರೆ ಎನ್ನಲಾಗಿದೆ.
ಆರೋಪಿಗಳು ತಮ್ಮ ಮನೆಯ ಹೆಣ್ಣುಮಕ್ಕಳ ಮದುವೆಗೆ ಆಭರಣಗಳ ಅಗತ್ಯವಿದೆ ಎಂದು ವ್ಯಾಪಾರಿಗೆ ತಿಳಿಸಿದ್ದಾರೆ. ಬಳಿಕ ತಮ್ಮ ಬಳಿ ಬಂಗಾರವಿದೆ ಎಂದು ಹೇಳಿ, ಸುಮಾರು 2.5 ಕೆಜಿ ಬೂದಿ ಮಣ್ಣನ್ನು ತೋರಿಸಿ ನಂಬಿಸಿದ್ದಾರೆ.
ಈ ವೇಳೆ ಬೂದಿ ಮಣ್ಣನ್ನು ಸೋಸಿದಾಗ ಆರಂಭದಲ್ಲಿ ಸುಮಾರು 10 ಗ್ರಾಂನಷ್ಟು ಗಟ್ಟಿ ಬಂಗಾರ ದೊರೆತಿದೆ. ಇದರಿಂದ ಆರೋಪಿಗಳ ಮಾತನ್ನು ನಂಬಿದ ವ್ಯಾಪಾರಿ, ಅವರಿಗೆ 1 ಕೆಜಿ 375 ಗ್ರಾಂ ಬಂಗಾರ ಹಾಗೂ ₹24.50 ಲಕ್ಷ ನಗದು ನೀಡಿದ್ದಾರೆ ಎನ್ನಲಾಗಿದೆ.
ಆದರೆ ಬಳಿಕ ಉಳಿದ ಬೂದಿ ಮಣ್ಣನ್ನು ಪರಿಶೀಲಿಸಿದಾಗ ಅದರಲ್ಲಿ ಯಾವುದೇ ಬಂಗಾರವಿಲ್ಲ, ಅದು ಬರೀ ಬೂದಿ ಮಣ್ಣು ಎಂಬುದು ಬೆಳಕಿಗೆ ಬಂದಿದೆ. ಈ ವೇಳೆಗೆ ಆರೋಪಿಗಳು ವಂಚಿಸಿರುವುದು ವ್ಯಾಪಾರಿಗೆ ತಿಳಿದುಬಂದಿದೆ.
ಘಟನೆ ಬಳಿಕ ಪ್ರಮುಖ ಆರೋಪಿ ಮುಕೇಶನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ.
ಈ ಸಂಬಂಧ ಮೋಸಕ್ಕೊಳಗಾದ ವ್ಯಾಪಾರಿ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದು, ವಂಚನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.



















