ಬೆಂಗಳೂರು: ಮತದಾನದ ಬಳಿಕ ಈವರೆಗೆ ಕೇವಲ ಗೆಲುವಿನ ಲೆಕ್ಕಾಚಾರಕ್ಕೆ ಸೀಮಿತವಾಗಿದ್ದು ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಸೋಮವಾರ (ಮೇ4) ಹೊರಬೀಳಲಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರೀ ಪೈಪೋಟಿ ನಿರೀಕ್ಷಿಸಲಾಗಿದ್ದು ಫಲಿತಾಂಶ ಯಾರ ಪರವಾಗಿರಲಿದೆ ಎಂಬ ಕುತೂಹಲಕ್ಕೆ ಸೋಮವಾರ ಉತ್ತರ ಸಿಗಲಿದೆ. ಸುಮಾರು 20 ದಿನಗಳ ಕಾಲ ಆಡಳಿತಪಕ್ಷ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ಕದನಕಣವಾಗಿ ಮಾರ್ಪಟ್ಟಿದ್ದ ಉಭಯ ಕ್ಷೇತ್ರಗಳಲ್ಲೂ ದಾಖಲೆಯ ಮತದಾನವಾಗಿರುವುದು ವಿಶೇಷವಾಗಿದೆ.
ದಾವಣಗೆರೆ ದಕ್ಷಿಣದಲ್ಲಿ ದಿ.ಶಾಮನೂರು ಮೊಮ್ಮಗ ಸಮರ್ಥ್ ಮತ್ತು ಬಿಜೆಪಿ ಶ್ರೀನಿವಾಸ ದಾಸಕರಿಯಪ್ಪ ನಡುವೆ ತೀವ್ರ ಪೈಪೋಟಿ ಏರ್ಪಡುವ ನಿರೀಕ್ಷೆ ಇದ್ದರೆ ಅತ್ತ ಬಾಗಲಕೋಟೆಯಲ್ಲಿ ದಿ.ಹೆಚ್.ವೈ. ಮೇಟಿ ಅವರ ಪುತ್ರ ಉಮೇಶ್ ಮೇಟಿ ಹಾಗೂ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ನಡುವೆ ಜಿದ್ದಾಜಿದ್ದಿನ ಫಲಿತಾಂಶದ ಸಾಧ್ಯತೆ ಇದೆ.
ದಾವಣಗೆರೆಯಲ್ಲಿ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ಗೆ ಅಷ್ಟಾಗಿ ಒಲಿದಿಲ್ಲ ಎನ್ನುವ ಅಭಿಪ್ರಾಯವಿರುವ ಹಿನ್ನೆಲೆಯಲ್ಲಿ ಫಲಿತಾಂಶದ ಬಗ್ಗೆ ಕೈ ಪಾಳೆಯದಲ್ಲೇ ಭಿನ್ನ ಲೆಕ್ಕಾಚಾರಗಳಿವೆ. ಬಾಗಲಕೋಟೆ ಕ್ಷೇತ್ರ ಗೆಲ್ಲುವ ಕುರಿತು ಬಿಜೆಪಿ ಭಾರೀ ನಿರೀಕ್ಷೆಯಲ್ಲಿದ್ದು ವಿಜಯಲಕ್ಷ್ಮೀ ಯಾರ ಪರವಾಗಿ ಒಲಿಯಲಿದ್ದಾಳೆ ಎಂಬುದು ಇಂದು ಮಧ್ಯಾಹ್ನದ ವೇಳೆಗೆ ಸ್ಪಷ್ಟವಾಗಲಿದೆ.






















