ಹರಿಹರ: ಸರ್ಕಾರದ ಹಾಗೂ ಭಕ್ತರ ಹಣ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಲೆಕ್ಕಕೊಡಿ ಚಳವಳಿ ತೀವ್ರಗೊಂಡ ಹಿನ್ನೆಲೆಯಲ್ಲಿ ಸೋಮವಾರ ನಡೆದ ಧರ್ಮದರ್ಶಿಗಳ ಸಭೆಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀವಚನಾನಂದ ಸ್ವಾಮೀಜಿ ಅವರನ್ನು ಪದಚ್ಯುತಗೊಳಿಸಲು ತೀರ್ಮಾನಿಸಲಾಗಿದೆ.
ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಟ್ರಸ್ಟಿನ ಧರ್ಮದರ್ಶಿಗಳ ನಡೆದ ಸಭೆಯಲ್ಲಿ ಧರ್ಮದರ್ಶಿಗಳ ಸರ್ವಾನುಮತದಿಂದ ಶ್ರೀವಚನಾನಂದ ಸ್ವಾಮೀಜಿ ಅವರನ್ನು ಪದಚ್ಯುತಿಗೊಳಿಸಲಾಗಿದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಬಸವರಾಜ್ ದಿಂಡೂರು ಘೋಷಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಪಂಚಮಸಾಲಿ ಪೀಠವನ್ನು ಸ್ಥಾಪಿಸಿದ ನಂತರ 2018ರ ಏಪ್ರಿಲ್ 20ರಂದು ಶ್ರೀವಚನಾನಂದ ಸ್ವಾಮೀಜಿಗಳನ್ನು ಈ ಪೀಠದ ಜಗದ್ಗುರುಗಳನ್ನಾಗಿ ಆಯ್ಕೆ ಮಾಡಲಾಗಿತ್ತು. ಸ್ವಾಭಿಮಾನ, ಸ್ವಾವಲಂಬನೆ, ಸಹಕಾರ, ಸಂಘಟನೆ, ಸಹಬಾಳ್ವೆ ತತ್ವದ ಮುಖಾಂತರ ನಾವು ಇವರನ್ನು ಆಯ್ಕೆ ಮಾಡಿಕೊಂಡಿದ್ದೆವು. ಅದಕ್ಕೆ ತದ್ವಿರುದ್ಧವಾಗಿ ಸಮಾಜದ ಜನರ ಆಶೋತ್ತರಗಳಿಗೆ ಸ್ಪಂದಿಸದೆ ಇರುವುದರಿಂದ ಹಾಗೂ ಸಮಾಜದ ಗೌರವ, ಘನತೆ, ಧಾರ್ಮಿಕ ಪರಂಪರೆ ಇವುಗಳನ್ನೆಲ್ಲ ಅವರು ಪಾಲಿಸದೆ ಇರುವುದರಿಂದ ಇವತ್ತಿನ ಸಭೆಯಲ್ಲಿ ಸರ್ವಾನುಮತದಿಂದ ಅವರನ್ನು ಪದಚ್ಯುತಗೊಳಿಸಲಾಗಿದೆ. ಇದು ತುರ್ತು ಮತ್ತು ದುರದೃಷ್ಟಕರ ಸಂಗತಿಯಾದರೂ ಕೂಡ ಸಮಾಜದ ಹಿತದೃಷ್ಟಿಯಿಂದ ನಾವು ಈ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.





















