ಮಂಗಳೂರು: ಯುದ್ಧದ ಸನ್ನಿವೇಶದಿಂದಾಗಿ ಮಧ್ಯಪ್ರಾಚ್ಯದಿಂದ ಭಾರತಕ್ಕೆ ಬರುತ್ತಿದ್ದ ಕೆಲವು ಔಷಧಗಳ ಪೂರೈಕೆ ಆಗುತ್ತಿಲ್ಲ. ಔಷಧ ಪೂರೈಕೆಗೆ ಸ್ವಲ್ಪ ಸಮಯ ಕೇಳುತ್ತಿದ್ದಾರೆ. ಈ ಹಿಂದೆ ಕೊಟ್ಟಿರುವ ಆರ್ಡರ್ಗಳ ಡೆಲಿವರಿ ಮಾಡಲು ಆಗುತ್ತಿಲ್ಲ. 30 ದಿನ ಸಮಯ ಕೊಡಿ ಎಂದು ಕೇಳುತ್ತಿದ್ದಾರೆ ಎಂದು ದ.ಕ.ಜಿಲ್ಲಾ ಉಸ್ತುವಾರಿಯೂ ಆಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೆಡಿಸಿನ್ ತಯಾರಿಕೆ ಮಾಡುವವರಿಗೂ ಕಚ್ಚಾವಸ್ತುಗಳು ಬರದೆ ಕೊರೆತೆ ಆಗಿದೆ. ಈ ಬಗ್ಗೆ ಅವರು ಸಹ ನಮಗೆ ಪತ್ರ ಬರೆದಿದ್ದಾರೆ. ಕೆಲವು ಔಷಧಗಳ ಬೆಲೆ ಏರಿಕೆಯಾಗಿದೆ. ಮೆಡಿಸಿನ್ ಉತ್ಪಾದನಾ ವೆಚ್ಚ ಕೂಡ ಹೆಚ್ಚಾಗಿದೆ. ಇದು ಹೆಚ್ಚಾಗದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು. ಸ್ಥಳೀಯ ತಯಾರಿಕರಿಗೆ ಗ್ಯಾಸ್, ಇಂಧನ ಸಮಸ್ಯೆಯಾದರೆ ಕಷ್ಟ ಆಗಬಹುದು. ಸದ್ಯ ಆತಂಕ ಪಡುವ ಅಗತ್ಯ ಇಲ್ಲ. ಆದರೆ ಕದನ ವಿರಾಮವಾದರೆ ನಮಗೆ ಸಮಸ್ಯೆ ಇಲ್ಲ. ಆಯಿಲ್, ಪೆಟ್ರೋಲಿಯಂ ಸೆಕ್ಟರ್ನ ಎಲ್ಲ ಕಂಪನಿಗಳಿಗೆ ಸಮಸ್ಯೆಯಾಗಿದೆ. ಕೇಂದ್ರ ಸರ್ಕಾರ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಬೇರೆ ಬೇರೆ ದೇಶದಿಂದ ಖರೀದಿ ಮಾಡುವ ವ್ಯವಸ್ಥೆ ಮಾಡಬೇಕು. ಬಹಳ ದೊಡ್ಡ ಜವಾಬ್ದಾರಿ ಕೇಂದ್ರದ ಮೇಲೆ ಇದೆ ಎಂದರು.
ಗ್ಯಾಸ್ ಸಮಸ್ಯೆ ಇದೆ: ರಾಜ್ಯದಲ್ಲಿ ಗ್ಯಾಸ್ ಸಮಸ್ಯೆ ಇದೆ ಎಂದು ಸ್ಪಷ್ಟವಾಗಿ ಹೇಳಬೇಕು. ಸುಮ್ಮನೆ ಸಮಸ್ಯೆ ಇಲ್ಲ ಎಂದು ಹೇಳಬಾರದು. ಅನೇಕ ಕಡೆ ಆಹಾರ ತಯಾರಿಕೆ ಶೇ.50ಕ್ಕೆ ಇಳಿಸಿದ್ದಾರೆ. ಕೋವಿಡ್ ಸಂದರ್ಭದ ಪರಿಸ್ಥಿತಿಯಂತಾಗಿದೆ ಈಗ. ಹಾಗೆಂದು ಸಮಸ್ಯೆ ಇಲ್ಲ ಎಂದು ಹೇಳಬಾರದು. ಜನರಿಗೆ ಸ್ಪಷ್ಟವಾಗಿ ವಿಷಯ ತಿಳಿಸಬೇಕು. ಎಲ್ಲ ಚೆನ್ನಾಗಿದೆ ಎಂದು ಹೇಳಿ ಜನರನ್ನು ದಾರಿ ತಪ್ಪಿಸಬಾರದು. ನಾವು ಕೇಂದ್ರ ಸರ್ಕಾರವೇ ಹೊಣೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಸಮಸ್ಯೆ ಇಲ್ಲ ಎಂದು ಯಾಕೆ ಹೇಳಬೇಕು. ಪರ್ಯಾಯ ಕ್ರಮ, ನಿಜಾಂಶವನ್ನು ಜನರ ಮುಂದೆ ಇಡಬೇಕು. ಎಲ್ಲ ಕಡೆ ಕಮರ್ಷಿಯಲ್ ಗ್ಯಾಸ್ಗೆ ತೊಂದರೆ ಇದೆ. ಇಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ. ಸಮಸ್ಯೆ ಇದ್ದಾಗ ಇಲ್ಲ ಎಂದು ಹೇಳಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.























