ರಣಜಿ ಫೈನಲ್ ಐತಿಹಾಸಿಕ: ಪಡಿಕ್ಕಲ್ ನಾಯಕತ್ವಕ್ಕೆ DK ಮೆಚ್ಚುಗೆ – ಫೈನಲ್ ಪೈಪೋಟಿ ಕಠಿಣವಾಗಲಿದೆ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಚಾಂಪಿಯನ್ ಪಟ್ಟಕ್ಕಾಗಿ ಜಮ್ಮು-ಕಾಶ್ಮೀರ ತಂಡದ ವಿರುದ್ಧ ಕಠಿಣ ಹೋರಾಟ ನಡೆಸುತ್ತಿದೆ. ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ಜಮ್ಮು-ಕಾಶ್ಮೀರ ತಂಡ ಶ್ಲಾಘನೀಯ ಪ್ರದರ್ಶನ ನೀಡಿದರೂ, ಕರ್ನಾಟಕದ ಅನುಭವ ಮತ್ತು ಬಲಿಷ್ಠ ತಂಡ ಸಂಯೋಜನೆ ಈ ಪಂದ್ಯದಲ್ಲಿ ಪ್ರಮುಖ ಅಂಶವಾಗಿ ಕಾಣುತ್ತಿದೆ.
ಭಾರತದ ಹಿರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಇಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಉಭಯ ತಂಡಗಳಿಗೆ ಶುಭ ಕೋರಿದ್ದು ಜಮ್ಮು-ಕಾಶ್ಮೀರ ತಂಡದ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಪಿಚ್ ಸ್ಥಿತಿ ಹಾಗೂ ತಂಡಗಳ ಸಾಮರ್ಥ್ಯವನ್ನು ಪರಿಗಣಿಸಿದರೆ, ಕರ್ನಾಟಕ ಬಲಿಷ್ಠವಾಗಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮಕ್ಕಳ ರಕ್ಷಣೆ: ಅಸಭ್ಯ ವಿಷಯ ಪ್ರಸಾರ ಮಾಡಿದ 5 OTTಗಳು ಬ್ಯಾನ್
ಕರ್ನಾಟಕದ ಬಲ – ನಾಯಕತ್ವ ಮತ್ತು ಅನುಭವ: ಕರ್ನಾಟಕ ತಂಡದ ನಾಯಕ ದೇವದತ್ ಪಡಿಕ್ಕಲ್ ಈ ಟೂರ್ನಿಯಲ್ಲಿ ಅದ್ಭುತ ನಾಯಕತ್ವ ವಹಿಸಿ ತಂಡವನ್ನು ಫೈನಲ್ಗೂ ಕರೆದೊಯ್ದಿದ್ದಾರೆ. ಶಿಸ್ತುಬದ್ಧ ಬೌಲಿಂಗ್ ದಾಳಿ ಮತ್ತು ಸ್ಥಿರ ಬ್ಯಾಟಿಂಗ್ ಕ್ರಮಾಂಕ ಕರ್ನಾಟಕದ ಪ್ರಮುಖ ಬಲವಾಗಿದೆ.
ಪಂದ್ಯದ ಮೊದಲ ದಿನ ಜಮ್ಮು-ಕಾಶ್ಮೀರ ಉತ್ತಮ ಆರಂಭ ಪಡೆದಿದ್ದರೂ, ಪಿಚ್ ಸಂಪೂರ್ಣ ಬ್ಯಾಟಿಂಗ್ಗೆ ಅನುಕೂಲಕರವಾಗಿದೆ. ಎರಡನೇ ದಿನದ ಆಟದಲ್ಲಿ ಕರ್ನಾಟಕ ಬೌಲರ್ಗಳು ಆರಂಭದಲ್ಲೇ ವಿಕೆಟ್ ಕಬಳಿಸಿ ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ಸೀಮಿತಗೊಳಿಸುವ ವಿಶ್ವಾಸದಲ್ಲಿದ್ದಾರೆ. ಇತ್ತಿಚಿನ ವರದಿ ಬಂದಾಗ ಜಮ್ಮು ಮತ್ತು ಕಾಶ್ಮೀರ ಮೊದಲ ಇನ್ನಿಂಗ್ಸ್ನ ಎರಡನೇ ದಿನದ ಆಟದ ಭೋಜನ ವಿರಾಮದ ವೇಳೆಗೆ 380/4 (120 ಓವರ್ಗಳಲ್ಲಿ)ಗಳಿಸಿದೆ.
ಇದನ್ನೂ ಓದಿ: ಮಕ್ಕಳ ಭವಿಷ್ಯ vs ಡಿಜಿಟಲ್ ಯುಗ: ಮೊಬೈಲ್ ಬಳಕೆಗೆ ಮಿತಿ ಬೇಕೇ?
ಶುಭಂ ಪುಂದಿರ್: 121 ರನ್ ಗಳಿಸಿ ಔಟಾದರು. ಅಬ್ದುಲ್ ಸಮದ್: 61 ರನ್ ಗಳಿಸಿ ಪ್ರಸಿದ್ಧ ಕೃಷ್ಣಗೆ ವಿಕೆಟ್ ಒಪ್ಪಿಸಿದರು. ಪ್ರಸ್ತುತ ಕ್ರೀಸ್ನಲ್ಲಿ ಕನ್ಹಯಾ ವಾಧವನ್ (45)* ಮತ್ತು ಪಾರಸ್ ಡೋಗ್ರಾ (36)* ಬ್ಯಾಟಿಂಗ್ ಮಾಡುತ್ತಿದ್ದಾರೆ.
ಕರ್ನಾಟಕದ ಬೌಲಿಂಗ್: ವೇಗಿ ಪ್ರಸಿದ್ಧ ಕೃಷ್ಣ 3 ವಿಕೆಟ್ ಪಡೆಯುವ ಮೂಲಕ ಕರ್ನಾಟಕಕ್ಕೆ ಆಸರೆಯಾಗಿದ್ದಾರೆ. ವಿದ್ಯಾಧರ್ ಪಾಟೀಲ್ 1 ವಿಕೆಟ್ ಪಡೆದಿದ್ದಾರೆ. ಶ್ರೇಯಸ್ ಗೋಪಾಲ್ ಮತ್ತು ಶಿಖರ್ ಶೆಟ್ಟಿ ವಿಕೆಟ್ ಪಡೆಯಲು ಹೋರಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯ ರಾಜನಗರ ಮೈದಾನದಲ್ಲಿ ಮಾಜಿ ಸ್ಪಿನ್ನರ್ಗೆ ಅಪರೂಪದ ಗೌರವ
ಪಂದ್ಯದ ಗತಿ: ಮೊದಲ ದಿನದ ಅಬ್ಬರದ ನಂತರ, ಎರಡನೇ ದಿನದ ಮೊದಲ ಸೆಷನ್ನಲ್ಲಿ ಕರ್ನಾಟಕದ ಬೌಲರ್ಗಳು ಎರಡು ಪ್ರಮುಖ ವಿಕೆಟ್ (ಪುಂದಿರ್ ಮತ್ತು ಸಮದ್) ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಜಮ್ಮು-ಕಾಶ್ಮೀರ ಬೃಹತ್ ಮೊತ್ತದತ್ತ ಹೆಜ್ಜೆ ಹಾಕುತ್ತಿದೆ.
ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಹಬ್ಬ: ವಿಶ್ವಕಪ್ ಪಂದ್ಯಾವಳಿ ಜೊತೆಗೂಡಿದ್ದರೂ, ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕದ ಬೆಂಬಲಿಗರು ತಂಡಕ್ಕೆ ಉತ್ಸಾಹ ತುಂಬುತ್ತಿದ್ದಾರೆ.
ಇದನ್ನೂ ಓದಿ: ನೇಮಕಾತಿ ಆರಂಭಿಸದಿದ್ದರೆ ಸದನದಲ್ಲೂ ಹೋರಾಟ
ಪಂದ್ಯ ನಿರ್ಣಾಯಕ ಹಂತದತ್ತ: “ಮೊದಲು ಜಮ್ಮು-ಕಾಶ್ಮೀರ ತಂಡವನ್ನು ಆಲ್ಔಟ್ ಮಾಡಬೇಕು; ಬಳಿಕ ಕರ್ನಾಟಕ ಬಲಿಷ್ಠವಾಗಿ ಪ್ರತಿಕ್ರಿಯಿಸಬಹುದು” ಎಂಬ ದಿನೇಶ್ ಕಾರ್ತಿಕ್ ಮಾತುಗಳು ಪಂದ್ಯಕ್ಕೆ ಮತ್ತಷ್ಟು ರೋಚಕತೆ ನೀಡಿವೆ. ಕರ್ನಾಟಕ ತನ್ನ ಅನುಭವ, ಶಿಸ್ತಿನ ಆಟ ಮತ್ತು ನಾಯಕತ್ವದ ಮೇಲೆ ಭರವಸೆ ಇಟ್ಟು ಕಣಕ್ಕಿಳಿದಿದೆ. ಫೈನಲ್ ಪಂದ್ಯ ಕಠಿಣ ಪೈಪೋಟಿಯತ್ತ ಸಾಗುತ್ತಿದ್ದು, ಚಾಂಪಿಯನ್ ಪಟ್ಟ ಮತ್ತೊಮ್ಮೆ ರಾಜ್ಯದ ಪಾಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.























