ಹುಬ್ಬಳ್ಳಿ: ನಗರದ ರಾಜನಗರದ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡಿದೆ. ಆದರೆ ಮೊದಲ ದಿನದ ಆಟದ ಆರಂಭದಲ್ಲೇ ತಂಡಕ್ಕೆ ಆಘಾತ ಎದುರಾಯಿತು.
ಜಮ್ಮು–ಕಾಶ್ಮೀರದ ಓಪನರ್ ಕಮ್ರಾನ್ ಇಕ್ಬಾಲ್ ಕೇವಲ 6 ರನ್ (36 ಎಸೆತ, 1 ಬೌಂಡರಿ) ಗಳಿಸಿ ಔಟಾದರು. ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ ಅವರ ದಿಟ್ಟ ಬೌಲಿಂಗ್ಗೆ ಅವರು ಬಲಿಯಾದರು. 10.2ನೇ ಓವರ್ನಲ್ಲಿ ಎರಡನೇ ಸ್ಲಿಪ್ನಲ್ಲಿ ನಿಂತಿದ್ದ ಕೆ.ಎಲ್. ರಾಹುಲ್ಗೆ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಆ ಸಮಯಕ್ಕೆ ಜಮ್ಮು–ಕಾಶ್ಮೀರ ತಂಡ 18 ರನ್ಗೆ 1 ವಿಕೆಟ್ ಕಳೆದುಕೊಂಡಿತ್ತು. ಆರಂಭಿಕ ಒತ್ತಡವನ್ನು ಕರ್ನಾಟಕದ ಬೌಲರ್ಗಳು ಸಮರ್ಥವಾಗಿ ಬಳಸಿಕೊಂಡರು.
ಜಮ್ಮು–ಕಾಶ್ಮೀರ ತಂಡ ಎಚ್ಚರಿಕೆಯ ಆಟ ಮುಂದುವರಿಸುತ್ತಿದ್ದು, ಮಧ್ಯಮ ಕ್ರಮದ ಬ್ಯಾಟರ್ಗಳು ಜೊತೆಯಾಟ ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಪಿಚ್ನಲ್ಲಿ ಸ್ವಲ್ಪ ಸ್ವಿಂಗ್ ಹಾಗೂ ಬೌನ್ಸ್ ಕಂಡುಬರುತ್ತಿರುವುದರಿಂದ ಕರ್ನಾಟಕದ ವೇಗಿಗಳಾದ ಪ್ರಸಿದ್ಧ ಕೃಷ್ಣ ಹಾಗೂ ಇತರರು ಕಟ್ಟು ನಿಟ್ಟಿನ ದಾಳಿ ಮುಂದುವರಿಸಿದ್ದಾರೆ. ಆರಂಭಿಕ ಆಘಾತದ ಬಳಿಕ ಜಮ್ಮು–ಕಾಶ್ಮೀರ ಸ್ಥಿರತೆ ಸಾಧಿಸಲು ಹೋರಾಟ ನಡೆಸುತ್ತಿದೆ.
ಕರ್ನಾಟಕ ತಂಡ ಆರಂಭಿಕ ಮುನ್ನಡೆ ಸಾಧಿಸಿರುವುದರಿಂದ ಪಂದ್ಯ ರೋಚಕ ಹಂತಕ್ಕೆ ತಲುಪಿದೆ. ಅಭಿಮಾನಿಗಳು ಮೈದಾನದಲ್ಲಿ ಉತ್ತಮ ಸಂಖ್ಯೆಯಲ್ಲಿ ಸೇರಿಕೊಂಡಿದ್ದು, ಫೈನಲ್ ಪಂದ್ಯಕ್ಕೆ ವಿಶೇಷ ಕಾತರ ವ್ಯಕ್ತವಾಗಿದೆ.























