ಬಾಕಿ ಹಣ ಪಾವತಿಗೆ ವಿಳಂಬ: ರಾಯಚೂರು ಜಿಪಂ ಸಿಇಒ ಕಾರ್ ಜಪ್ತಿಗೆ ನ್ಯಾಯಾಲಯ ಆದೇಶ
ರಾಯಚೂರು: ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನಿರ್ಮಿಸಲಾದ ಶಾಲಾ ಕೊಠಡಿ ಕಾಮಗಾರಿಗೆ ಸಂಬಂಧಿಸಿದ ಬಾಕಿ ಹಣ ಪಾವತಿಯಲ್ಲಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ, ರಾಯಚೂರು ಜಿಲ್ಲಾ ಪಂಚಾಯತ್ ಚರಾಸ್ಥಿ ಜಪ್ತಿಗೆ ನ್ಯಾಯಾಲಯ ಆದೇಶ ನೀಡಿದ್ದು, ಅದರಂತೆ ಗುರುವಾರ ನ್ಯಾಯಾಲಯ ಸಿಬ್ಬಂದಿಗಳು ಜಿಪಂ CEO ಅವರ ಕಾರ್ ಜಪ್ತಿಗೆ ಮುಂದಾದ ಘಟನೆ ನಡೆದಿದೆ.
ಸಿಂಧನೂರು ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಪ್ರಕೃತಿ ವಿಕೋಪದ ಸಮಯದಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾರ್ಯವನ್ನು ಗುತ್ತಿಗೆದಾರ ಚನ್ನಬಸವ ಅವರು ಕೈಗೊಂಡಿದ್ದರು. ಈ ಕಾಮಗಾರಿಗೆ ಸಂಬಂಧಿಸಿದಂತೆ ಸುಮಾರು 2.15 ಲಕ್ಷ ರೂಪಾಯಿ ಬಾಕಿ ಉಳಿದಿತ್ತು. ಹಲವು ಬಾರಿ ಮನವಿ ಮಾಡಿದರೂ ಹಣ ಪಾವತಿ ಆಗದ ಕಾರಣ, ಅವರು ಸಿಂಧನೂರು ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು.
ಇದನ್ನೂ ಓದಿ: JDS ಜಿಲ್ಲಾಧ್ಯಕ್ಷರ ಆಯ್ಕೆ ವಿವಾದ: ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ
ಈ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಗುತ್ತಿಗೆದಾರಿಗೆ ಒಟ್ಟು 8.22 ಲಕ್ಷ ರೂಪಾಯಿ ಪಾವತಿಸಬೇಕು ಎಂದು ಆದೇಶ ಹೊರಡಿಸಿತ್ತು. ಆದೇಶವನ್ನು ಜಾರಿಗೊಳಿಸದ ಹಿನ್ನೆಲೆ, ಜಿಲ್ಲಾ ಪಂಚಾಯತ್ ಚರಾಸ್ಥಿ ಜಪ್ತಿ ಮಾಡುವಂತೆ ನ್ಯಾಯಾಲಯ ಸೂಚನೆ ನೀಡಿತು.
ಈ ಹಿನ್ನೆಲೆಯಲ್ಲಿ ಗುರುವಾರ ನ್ಯಾಯಾಲಯದ ಸಿಬ್ಬಂದಿಗಳು ರಾಯಚೂರು ಜಿಲ್ಲಾ ಪಂಚಾಯತ್ ಕಚೇರಿಗೆ ಆಗಮಿಸಿ, ಸಿಇಒ ಅವರ ಅಧಿಕೃತ ವಾಹನವನ್ನು ಜಪ್ತಿಗೆ ಮುಂದಾದರು. ಈ ವೇಳೆ ಕಚೇರಿ ಆವರಣದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಇದನ್ನೂ ಓದಿ: ದಾಂಡೇಲಿ: ಸೈಟ್ ಚೋರಿ ಬಳಿಕ ಸರ್ಕಾರಿ ಮನೆಗಳ ಮೇಲೂ ಕಣ್ಣು
ನ್ಯಾಯಾಲಯದ ಆದೇಶ ಪಾಲನೆ ಆಗದೇ ಇರುವುದೇ ಈ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಸಂಬಂಧಪಟ್ಟ ಇಲಾಖೆಯಿಂದ ಶೀಘ್ರವಾಗಿ ಬಾಕಿ ಮೊತ್ತ ಪಾವತಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ, ಕಾರ್ ಜಪ್ತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಈ ಪ್ರಕರಣವು ಸರ್ಕಾರಿ ಕಾಮಗಾರಿಗಳಲ್ಲಿ ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಯಲ್ಲಿ ಆಗುವ ವಿಳಂಬದ ಗಂಭೀರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಸಾರ್ವಜನಿಕ ವಲಯದಲ್ಲೂ ಈ ಘಟನೆ ಚರ್ಚೆಗೆ ಗ್ರಾಸವಾಗಿದೆ.























