Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ ಹಿಪ್ಪರಗಿ ಬ್ಯಾರೇಜ್: ಮುರಿದ ಗೇಟ್, 1 ಟಿಎಂಸಿಯಷ್ಟು ನೀರು ಖಾಲಿ

ಹಿಪ್ಪರಗಿ ಬ್ಯಾರೇಜ್: ಮುರಿದ ಗೇಟ್, 1 ಟಿಎಂಸಿಯಷ್ಟು ನೀರು ಖಾಲಿ

0
139

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಕೃಷ್ಣಾ ನದಿಗೆ ನಿರ್ಮಿಸಿರುವ ಹಿಪ್ಪರಗಿ ಬ್ಯಾರೇಜ್‌ನಲ್ಲಿನ ನೀರಿನ ಒತ್ತಡಕ್ಕೆ 22ನೇ ಗೇಟ್ ಮುರಿದ ಪರಿಣಾಮ ಬ್ಯಾರೇಜ್‌ನಲ್ಲಿ ಸಂಗ್ರಹಗೊಂಡಿದ್ದ ಅಪಾರ ಪ್ರಮಾಣದ ನೀರು ಪೋಲಾದ ಘಟನೆ ಮಂಗಳವಾರ ನಡೆದಿದೆ.

ಬೆಳಿಗ್ಗೆ 11.30 ರ ಸುಮಾರಿಗೆ 22ನೇ ಗೇಟ್‌ನ ಕೆಳಭಾಗ ಮುರಿದ ಪರಿಣಾಮ ನೀರಿನ ಪೋಲಿನ ಒತ್ತಡದಿಂದ ಇಡೀ ಗೇಟ್ ಮುರಿದಿದೆ. ತಕ್ಷಣ ಎಚ್ಚೆತ್ತ ನೀರಾವರಿ ಇಲಾಖೆ ಅಧಿಕಾರಿಗಳ ತಂಡವು ಮುಂಜಾಗ್ರತಾ ಕ್ರಮವಾಗಿ ಗೇಟ್ ಅಳವಡಿಕೆಯ ವಿಶೇಷ ತಜ್ಞರಿಂದ ಸಿಬ್ಬಂದಿಗಳೊಂದಿಗೆ ಗೇಟ್ ಅಳವಡಿಕೆ ಕಾರ್ಯದಲ್ಲಿ ತೊಡಗಿದ್ದಾರೆ.

1 ಟಿಎಂಸಿಯಷ್ಟು ನೀರು ಖಾಲಿ: ಸಂಜೆವರೆಗೆ ಬ್ಯಾರೇಜ್‌ನಲ್ಲಿ ಸಂಗ್ರಹಗೊಂಡಿರುವ ನೀರಿನ ಪ್ರಮಾಣದಲ್ಲಿ ಸುಮಾರು ಆರೇಳು ಇಂಚಿನಷ್ಟು ನೀರು ಪೋಲಾಗಿರುವುದು ಕಂಡು ಬಂದಿದೆ. ಒಟ್ಟಾರೆ ಈ ಗೇಟ್‌ನ ಹಾನಿಯಿಂದಾಗಿ 1 ಟಿಎಂಸಿಯಷ್ಟು ನೀರು ಪೋಲಾಗುವ ಸಂಭವವಿದೆಯೆಂದು ಅಧಿಕಾರಿಗಳ ತಂಡ ತಿಳಿಸಿದೆ.

ಇದನ್ನೂ ಓದಿ: ಧಾರವಾಡ ಹೈಕೋರ್ಟ್‌ಗೆ ಬಾಂಬ್ ಬೆದರಿಕೆ

ತಹಶೀಲ್ದಾರ್ ಭೇಟಿ: ಘಟನಾ ಸ್ಥಳಕ್ಕೆ ಮಾಹಿತಿಯನ್ವಯ ತಕ್ಷಣ ಸ್ಪಂದಿಸಿದ ರಬಕವಿ-ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿ ಪರಿಶೀಲನೆ ನಡೆಸಿದರು. ಗೇಟ್‌ನ ಕೆಳಭಾಗನ ಪ್ಲೇಟ್ ಮುರಿದ ಪರಿಣಾಮ ನೀರು ಪೋಲಾಗುವಿಕೆಗೆ ಕಾರಣವಾಗಿದ್ದು, ಸಂಜೆಯವರೆಗೆ ಸರಿಪಡಿಸಲಾಗುವುದೆಂದು ಸ್ಪಷ್ಟಪಡಿಸಿದರು.

ನೀರಿನ ಒತ್ತಡವಿರುವ ಕಾರಣ ಕಡಿಮೆಯಾಗುತ್ತಿದ್ದಂತೆ ಗೇಟ್ ದುರಸ್ಥಿ ಕಾರ್ಯಕ್ಕೆ ಅನುಕೂಲವಾಗಲಿದೆ. ಈ ಕುರಿತು ನುರಿತ ಕಾರ್ಮಿಕರಿಂದ ಗೇಟ್ ಅಳವಡಿಕೆ ಕಾರ್ಯ ಭರದಿಂದ ಸಾಗುತ್ತಿದೆಯೆಂದರು.

ಭರ್ತಿ ನೀರು: ಹಿಪ್ಪರಗಿ ಬ್ಯಾರೇಜ್‌ನ ಭರ್ತಿ ಸಾಮರ್ಥ್ಯ ಹೊಂದಿರುವ 6 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಜಿಲ್ಲಾಡಳಿತದಿಂದ ಇದೀಗ ಗೇಟ್‌ನ ಪ್ಲೇಟ್ ಅಳವಡಿಕೆಯಲ್ಲಿ ತ್ವರಿತ ಕಾರ್ಯದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ಸ್ಪಷ್ಟ ನೀರು ಯಾವಾಗಲೂ ಶುದ್ಧ ನೀರು ಎಂದರ್ಥವಲ್ಲ: ಜಲ ವಿಜ್ಞಾನಿ ಡಾ. ಅನಿಲ್ ಕುಮಾರ್

ಯಾವುದೇ ಅನಾಹುತವಾಗಿಲ್ಲ: ಅದೃಷ್ಟವಶಾತ್ ಬ್ಯಾರೇಜ್‌ನಲ್ಲಿನ ನಿಂತ ನೀರು ಪೋಲಾಗಿರುವುದರಿಂದ ನೀರಿನ ಒತ್ತಡ ಕಡಿಮೆ ಕಾರಣ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಇದೀಗ ಹಿರಿಯ ಅಧಿಕಾರಿಗಳ ತಂಡ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ನೀರು ಪೋಲಾಗುವುದನ್ನು ತಡೆಯಲು ಮತ್ತು ಬ್ಯಾರೇಜ್‌ನ ಸುರಕ್ಷತೆ ಖಚಿತಪಡಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ. ಸಂಜೆಯೊಳಗಾಗಿ ಗೇಟ್ ಸಮಸ್ಯೆ ಕುರಿತಾದ ಪೂರ್ಣ ಕಾರ್ಯ ಮಾಡುವುದಾಗಿ ಭರವಸೆಯಿದೆಯೆಂದು ಅಧಿಕಾರಿಗಳ ತಂಡ ಸ್ಪಷ್ಟಪಡಿಸಿದೆ.

ಕಾರಣ ತಿಳಿದಿಲ್ಲ: 6 ಟಿಎಂಸಿಯಷ್ಟು ನೀರಿನ ಸಾಮರ್ಥ್ಯ ಹೊಂದಿರುವ ಹಿಪ್ಪರಗಿ ಬ್ಯಾರೇಜ್‌ನ ಎಲ್ಲ 22 ಗೇಟ್‌ಗಳ ಬಗ್ಗೆ ತಾಂತ್ರಿಕ ವರ್ಗ ಆಗಾಗ್ಗೆ ಪರಿಶೀಲನೆಯಲ್ಲಿದ್ದರೂ ಗೇಟ್‌ನ ಪ್ಲೇಟ್ ಯಾವ ಕಾರಣಕ್ಕೆ ಮುರಿದಿದೆ ಎಂಬುದು ಇನ್ನೂ ಕಾರಣ ತಿಳಿದು ಬಂದಿಲ್ಲ. ತಾಂತ್ರಿಕ ಅಧಿಕಾರಿಗಳ ಪರಿಶೀಲನೆ ನಂತರ ಸ್ಪಷ್ಟ ಮಾಹಿತಿ ದೊರೆಯಲಿದೆ.