ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ತೀವ್ರ ಟೀಕೆ ನಡೆಸಿದ್ದಾರೆ. ಅವರು “ಭಾರತದ ಪ್ರಜಾಪ್ರಭುತ್ವವನ್ನು ಗಂಭೀರ ಅಪಾಯ ಎದುರಿಸುತ್ತಿದೆ. ಈ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವೂ ತಟಸ್ಥವಾಗಿ ವರ್ತಿಸುತ್ತಿಲ್ಲ” ಎಂದು ಆರೋಪಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಅವರು ನಡೆಸಿದ ಹೈಡ್ರೋಜನ್ ಬಾಂಬ್ ಪತ್ರಿಕಾಗೋಷ್ಠಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಕರ್ನಾಟಕದ ಮತಗಳ್ಳತನದ ಬಗ್ಗೆ ವಿಶಿಷ್ಟವಾಗಿ ಉಲ್ಲೇಖಿಸಿದರು. “ಆಳಂದ ಕ್ಷೇತ್ರದಲ್ಲಿ ಒಟ್ಟು 6,018 ಮತಗಳನ್ನು ಕದ್ದಿದ್ದಾರೆ. ಇದು ಕೇವಲ ಒಂದು ಉದಾಹರಣೆ. ಇಂತಹ ಘಟನೆಗಳು ದೇಶದ ಹಲವಾರು ಭಾಗಗಳಲ್ಲಿ ನಡೆಯುತ್ತಿವೆ” ಎಂದು ಅವರು ಆರೋಪಿಸಿದರು.
ಅವರು ಮುಂದುವರಿದು, “ಇದು ಕಾಂಗ್ರೆಸ್ ಅಥವಾ ರಾಹುಲ್ ಗಾಂಧಿಯ ವಿರುದ್ಧದ ದಾಳಿ ಅಲ್ಲ. ಇದು ಭಾರತದ ಪ್ರಜಾಪ್ರಭುತ್ವದ ಮೇಲೆ ನಡೆದಿರುವ ಅತ್ಯಂತ ಗಂಭೀರ ಹಲ್ಲೆ. ಜನರ ಹಕ್ಕುಗಳನ್ನು ಕಿತ್ತುಕೊಳ್ಳುವ ಈ ಸಂಚು ವಿರುದ್ಧ ಹೋರಾಡುವುದು ನಮ್ಮ ಕರ್ತವ್ಯ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಲವು ದಾಖಲೆಗಳನ್ನು ಪ್ರದರ್ಶಿಸಿದ ರಾಹುಲ್ ಗಾಂಧಿ, ಬಿಜೆಪಿ ವಿರುದ್ಧದ ತಮ್ಮ ಆರೋಪಗಳನ್ನು ಸಾಬೀತುಪಡಿಸಲು ಪ್ರಯತ್ನಿಸಿದರು. “ಜನರು ನೀಡದ ಅಧಿಕಾರವನ್ನು ಕದಿಯುವ ಪ್ರಯತ್ನ, ಯಾವಾಗಲೂ ವಿಫಲವಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಇದು ಹೈಡ್ರೋಜನ್ ಬಾಂಬಲ್ಲ: ಸೆಪ್ಟೆಂಬರ್ 1 ರಂದು ಪಾಟ್ನಾದಲ್ಲಿ ನಡೆದ ಮತದಾರರ ಹಕ್ಕುಗಳ ಯಾತ್ರೆಯ ಕೊನೆಯಲ್ಲಿ ರಾಹುಲ್ ಗಾಂಧಿ, ಮತ ಕಳ್ಳತನದ ಬಗ್ಗೆ ತಮ್ಮ ವಿಚಾರಗಳನ್ನು ಉಲ್ಲೇಖಿಸಿದ್ದರು. ಹಿಂದಿನಿದ್ದು ಪರಮಾಣು ಬಾಂಬ್ ಈಗ ಹಾಕುವುದು ಹೈಡ್ರೋಜನ್ ಬಾಂಬ್ ಎಂದು ಹೇಳಿದ್ದರು. ಇಂದು ಪತ್ರಿಕಾಗೋಷ್ಠಿಯಲ್ಲಿ ಇದು ಹೈಡ್ರೋಜನ್ ಬಾಂಬಲ್ಲ, ಹೈಡ್ರೋಜನ್ ಬಾಂಬ್ ಬರಬೇಕಷ್ಟೇ. ಈ ದೇಶದ ಯುವಕರಿಗೆ ಚುನಾವಣೆಗಳಲ್ಲಿ ಹೇಗೆ ಅಕ್ರಮ ನಡೆಯುತ್ತಿದೆ ಎಂಬುದನ್ನು ತಿಳಿಸುವ ನಿಟ್ಟಿನಲ್ಲಿ ಇದು ಮತ್ತೊಂದು ಮೈಲಿಗಲ್ಲು ಎಂದು ಹೇಳಿದ್ದಾರೆ.