ತುಮಕೂರು: 60 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ

0
30

ತುಮಕೂರು ರಾಗಿ ಬಿತ್ತನೆ ಕೊನೆ ಹಂತದಲ್ಲಿ ಚುರುಕುಗೊಂಡಿದ್ದು ಆಗಸ್ಟ್ ತಿಂಗಳ ಅಂತ್ಯದಲ್ಲಿ ಸುಮಾರು 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರಿನಲ್ಲಿ 1,51,375 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಆಗಸ್ಟ್ ಅಂತ್ಯದವರೆಗೆ 1,47,101 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಆಗಸ್ಟ್ ಮಧ್ಯದ ಭಾಗದವರೆಗೂ 90,334 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದರೆ, ಜುಲೈ ಅಂತ್ಯಕ್ಕೆ ಕೇವಲ 46,867 ಹೆಕ್ಟೇರ್‌ಗಳಲ್ಲಷ್ಟೇ ಬಿತ್ತನೆಯಾಗಿತ್ತು. ಆಗಸ್ಟ್ ಮೂರನೇ ವಾರದಲ್ಲಿ ರಾಗಿ ಬಿತ್ತನೆ ಚುರುಕು ಪಡೆದುಕೊಂಡಿತ್ತು.

ರಾಗಿ ಬಿತ್ತನೆಯೂ ಹಾಕಿಕೊಂಡಿದ್ದ ಗುರಿಯ ಸಮೀಪಕ್ಕೆ ಬಂದಿದ್ದು. ಸಕಾಲಕ್ಕೆ ಮಳೆಯಾಗದೆ ಉಳಿದ ಬೆಳೆಗಳ ಬಿತ್ತನೆಗೆ ತೀವ್ರ ಹಿನ್ನಡೆಯಾಗಿದೆ. ನವೆಂಬರ್ ತಿಂಗಳ ಕೊನೆಯವರೆಗೂ ಮಳೆಯಾದರೆ ರಾಗಿ ಬೆಳೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಕೊನೆಗಾಲದಲ್ಲಿ ಮಳೆ ಕೈಕೊಟ್ಟರೆ ಬೆಳೆ ಕೈ ಸೇರುವುದಿಲ್ಲ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇಂಗಾ ಬಿತ್ತನೆ ಇಳಿಕೆಯಾಗುತ್ತಲೇ ಸಾಗಿದ್ದು, ಈ ಬಾರಿಯೂ ಇದೇ ಸ್ಥಿತಿ ಮುಂದುವರೆದಿದೆ. ಒಟ್ಟು 76.570 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದ್ದರೆ, ಇಲ್ಲಿಯವರೆಗೆ 41,331 ಹೆಕ್ಟೇರ್‌ಗಳಲ್ಲಿ ಮಾತ್ರ ಶೇಂಗಾ ಬಿತ್ತನೆಯಾಗಿದೆ.

ಕಳೆದ ನಾಲೈದು ವರ್ಷಗಳವರೆಗೂ 1.50 ಲಕ್ಷ ಹೆಕ್ಟೇರ್‌ಗಳವರೆಗೂ ಬಿತ್ತನೆ ಮಾಡಲಾಗುತ್ತಿತ್ತು. ಸಕಾಲಕ್ಕೆ ಮಳೆಯಾಗದಿರುವುದು, ರೋಗಭಾದೆ, ಬೆಲೆ ಕುಸಿತ ಸೇರಿದಂತೆ ಹಲವು ಸಂಕಷ್ಟಗಳಿಗೆ ಸಿಲುಕಿದ ರೈತರು ಶೇಂಗಾ ಬಿತ್ತನೆ ಕಡಿಮೆ ಮಾಡುತ್ತಲೇ ಬಂದಿದ್ದಾರೆ. ಈ ಬಾರಿಯೂ ಬಿತ್ತನೆಯ ಸಮಯದಲ್ಲಿ ಮಳೆ ಕೈಕೊಟ್ಟಿದ್ದು, ಶೇಂಗಾ ಬದಲು ಪರ್ಯಾಯ ಬೆಳೆಯುತ್ತ ಮುಖ ಮಾಡಿದ್ದಾರೆ. ಶೇಂಗಾ ಜಾಗಕ್ಕೆ ವಾಣಿಜ್ಯ ಬೆಳೆಗಳು ಕಾಲಿಟ್ಟಿವೆ.

ಈ ಬಾರಿ ಭತ್ತ, ಜೋಳ, ದ್ವಿದಳ ಧಾನ್ಯ ಬಿತ್ತನೆಯೂ ಗಣಿನೀಯವಾಗಿ ಕುಸಿತ ಕಂಡಿದೆ. ರಾಗಿ ಹೊರತುಪಡಿಸಿದರೆ ಉಳಿದ ಬೆಳೆಗಳ ಬಿತ್ತನೆಯಾಗಿಲ್ಲ. ಜಿಲ್ಲೆಯಲ್ಲಿ ಸಿರಿಧಾನ್ಯ ಬಿತ್ತನೆಯೂ ಕುಸಿತ ಒಂದು ಕಾಲಕ್ಕೆ ಸಿರಿ ಧಾನ್ಯಗಳ ತವರು ಎನಿಸಿಕೊಂಡಿದ್ದ ಜಿಲ್ಲೆಯಲ್ಲಿ ಸಿರಿಧಾನ್ಯದ ಬೆಳೆ ಹುಡುಕುವಂತಾಗಿದೆ.

ಸಜ್ಜೆ, ನವಣೆ, ಊದಲು, ಆರ್ಕ, ಕೊರ್ಲು, ಸಾವೆ ಅನ್ನು ಸಾಕಷ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಈ ವರ್ಷ 4,460 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಇದ್ದರೂ, ಕೇವಲ 209 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ವಿವಿಧ ಬೆಳೆಗಳ ಒಟ್ಟು 3,20,280 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದ್ದು, ಇಲ್ಲಿಯವರೆಗೆ 2,56,676 ಹೆಕ್ಟೇರ್ (ಶೇ.80) ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

Previous articleದಾವಣಗೆರೆ: ಮೆರವಣಿಗೆ ಮಾರ್ಗ ಬದಲು, ಗಣೇಶನ ಮುಖಕ್ಕೆ ಕಪ್ಪುಬಟ್ಟೆ ಹಾಕಿ ಆಕ್ರೋಶ
Next articleದುಲೀಪ್ ಟ್ರೋಫಿ: 11 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಿದ ಕೇಂದ್ರ ವಲಯ!

LEAVE A REPLY

Please enter your comment!
Please enter your name here