ಬೆಂಗಳೂರು: ಜೀವನದಲ್ಲಿ ಅನೇಕ ಕನಸುಗಳನ್ನು ಹೊತ್ತು ಇಷ್ಟಪಟ್ಟು ಓದಿ ಮಕ್ಕಳು ಪದವಿ ಪಡೆಯುತ್ತಾರೆ. ಆದರೆ ಆ ಪಡೆದ ಪದವಿ ಹಿಡಿದುಕೊಂಡು ಉದ್ಯೋಗವನ್ನು ಹುಡುಕುವುದು ಇಂದಿನ ದಿನದಲ್ಲಿ ತುಂಬಾ ಕಷ್ಟಕರವಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಇಂಜಿನಿಯರ್ ಪದವಿ ಪಡೆದ ಶೇ. 83ರಷ್ಟು ಪದವೀಧರರಿಗೆ ಉದ್ಯೋಗವೇ ಸಿಕ್ಕಿಲ್ಲ ಎನ್ನುವ ಶಾಕಿಂಗ್ ವರದಿಯೊಂದು ಬಿಡುಗಡೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಹಲವು ಕಂಪನಿಗಳು ಇದ್ದ ನೌಕರರನ್ನು ಕೆಲಸದಿಂದ ತೆಗೆದು ಹಾಕುತ್ತಿವೆ. ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಉದ್ಯಮಗಳು, ಉದ್ಯಮಿಗಳು ಉದ್ಯೋಗದಲ್ಲಿ ನಷ್ಟ ಅನುಭವಿಸಿದ್ದಾರೆ. ಇದರಿಂದಾಗಿಯೂ ನಿರುದ್ಯೋಗದ ಸಮಸ್ಯೆ ಏರಿಕೆಯಾಗುತ್ತಿದೆ. ಅಧ್ಯಯನದ ಪ್ರಕಾರ ಭಾರತದಲ್ಲಿ ನಿರುದ್ಯೋಗ ಇನ್ನು ಹೆಚ್ಚುವ ಸಂಭವ ಇದೆ ಎಂದು ಹೇಳಲಾಗಿದೆ. ಅದರಲ್ಲೂ ಎಂಜಿನಿಯರ್ ಆಗಬೇಕು ಎನ್ನುವ ಕನಸು ಕಂಡು ಪದವಿ ಸೇರುತ್ತಿರುವ ಶೇ. 83ರಷ್ಟು ಪದವೀಧರರಿಗೆ ಉದ್ಯೋಗವೇ ಸಿಕ್ಕಿಲ್ಲ ಎನ್ನುವ ಶಾಕಿಂಗ್ ವರದಿಯೊಂದು ಬಿಡುಗಡೆಯಾಗಿದೆ.
ಈಗಿನ ಕಾಲದಲ್ಲಿ ಬಾಲ್ಯದಲ್ಲಿಯೇ ಪಾಲಕರು ನನ್ನ ಮಗ-ಮಗಳು ಇದನ್ನೇ ಓದಬೇಕು ಎಂದು ಮಕ್ಕಳ ಮೇಲೆ ಒತ್ತಡವನ್ನು ಹೇರುತ್ತಾರೆ. ಮಕ್ಕಳ ಆಸಕ್ತಿಯನ್ನು ಗಮನಿಸದೇ ಒತ್ತಾಯಪೂರ್ವಕವಾಗಿ ಶಿಕ್ಷಣ ನೀಡಲು ಮುಂದಾಗುತ್ತಾರೆ. ಹತ್ತನೇ ತರಗತಿ ಮುಗಿಯುವುದೇ ತಡ ಆಗ ಎಂಜಿನಿಯರ್, ಮೆಡಿಕಲ್ ಕಡೆಗೆ ಹೋಗಬೇಕು ಎನ್ನುವ ಉದ್ದೇಶದಿಂದ ವಿಜ್ಞಾನ ವಿಭಾಗಕ್ಕೆ ಸೇರಿಸುತ್ತಾರೆ. ಆಗ ಮೆಡಿಕಲ್ ಸೀಟು ಅಥವಾ ಇನ್ಯಾವುದೋ ಸೀಟು ಸಿಗಲಿಲ್ಲ ಎಂಬ ಕಾರಣಕ್ಕೆ ಎಂಜಿನಿಯರಿಂಗ್ ಮಾಡಲು ಹೇಳುತ್ತಾರೆ.
ಮೆಡಿಕಲ್ ಸೀಟು ಸಿಗುವುದು ಇಂದು ಅತ್ಯಂತ ಕಷ್ಟಕರವಾಗಿದೆ. ಆದರೆ, ಮ್ಯಾನೆಜ್ಮೆಂಟ್ ಕೋಟಾದಡಿ ಸೀಟು ಪಡೆಯಲು ಕೋಟಿಗಟ್ಟಲೆ ದುಡ್ಡು ವ್ಯಯಿಸಬೇಕಾಗುತ್ತದೆ. ಹೀಗಾಗಿ ಅಥವಾ ಬೇರೆ ಮಾರ್ಗವಿಲ್ಲದೆ ಎಂಜಿನಿಯರಿಂಗ್ ಪದವಿಯತ್ತ ಮುಖ ಮಾಡುತ್ತಾರೆ. ಇಷ್ಟವಿಲ್ಲದೆ ಕಷ್ಟ ಪಟ್ಟು ಎಂಜಿನಿಯರಿಂಗ್ ಮಾಡುವವರು ಒಂದಡೆಯಾದರೆ, ಕನಸು ಕಂಡು ಬರುವವರು ಇನ್ನೊಂದಡೆ. ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೊಂದಿದ್ದ ಎಂಜಿನಿಯರಿಂಗ್ ಇಂದು ತನ್ನ ಡಿಮ್ಯಾಂಡ್ನ್ನು ಕಳೆದುಕೊಳ್ಳುತ್ತಿದೆ.
ಅಂದು ಲಕ್ಷ ಲಕ್ಷ ಸಂಬಳ ಪಡೆಯುತ್ತಿದ್ದವರು. ಇಂದು ಕಡಿಮೆ ಸಂಬಳಕ್ಕೆ ಬಂದಿದ್ದಾರೆ. ಅಲ್ಲದೇ ಎಷ್ಟೋ ಕಂಪನಿಗಳು ದೊಡ್ಡ ದೊಡ್ಡ ವೇತನ ಪಡೆಯುತ್ತಿರುವ ನೌಕರರನ್ನು ಟಾರ್ಗೆಟ್ ಮಾಡಿದ್ದು ಇದೆ. ಪ್ರತಿದಿನವೂ ಲೇ ಆಫ್ ಸುದ್ದಿ ಕೇಳಿಬರುತ್ತಿದೆ. ಇದಲ್ಲದೇ ಪದವೀಧರರ ಸಂಖ್ಯೆ ಹೆಚ್ಚದ್ದರಿಂದಾಗಿ ಕಡಿಮೆ ಸಂಬಳಕ್ಕೆ ಅನಿವಾರ್ಯವಾಗಿ ಅಭ್ಯರ್ಥಿಗಳು ಮುಂದಾಗುತ್ತಿದ್ದಾರೆ. ಇದರಿಂದಾಗಿ ದೊಡ್ಡ ನಗರಗಳಲ್ಲಿ ಬಾಡಿಗೆ ಕಟ್ಟಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ತಂತ್ರಜ್ಞಾನ ಮುಂದುವರಿದಿದ್ದು ನಿರುದ್ಯೋಗಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಇಂದಿನ ಎಐ ತಂತ್ರಜ್ಞಾನದತ್ತ ಕಂಪನಿಗಳು ಮಾರುಹೋಗಿದ್ದು, ಎಐನಲ್ಲಿ ಹೆಚ್ಚಿನ ಹೂಡಿಕೆಗೆ ಮುಂದಾಗಿವೆ. ಕೃತಕ ಬುದ್ಧಿಮತ್ತೆ ಬಳಕೆ ಜಾಸ್ತಿ ಮಾಡಿ ಉದ್ಯೋಗಿಗಳನ್ನು ಕಡಿತಗೊಳಿಸಲು ಕಂಪನಿಗಳು ಮುಂದಾಗಿ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.