ಸೇಡು ಬಿಡಿ, ಕ್ಷಮೆಯನ್ನು ಆರಿಸಿ

ನಮಗೆ ಆದ ನೋವು, ಗಾಯಗಳಿಗೆ ಪ್ರತೀಕಾರವಾಗಿ ಹಾನಿಯನ್ನು ಉಂಟುಮಾಡುವುದು ಸೇಡು. ನೋವು, ಗಾಯಗಳನ್ನು ತೊಳೆಯಲಾಗದು. ಸೇಡು ತೀರಿಸಿಕೊಳ್ಳುವವ ಎರಡು ಗೋರಿಗಳನ್ನು ತೋಡುತ್ತಾನೆ. ಒಂದು ಆತನ ವೈರಿಯದು, ಇನ್ನೊಂದು ತನ್ನದೇ. ಅಂದರೆ ಸೇಡು ಮತ್ತಷ್ಟು ಹಾನಿ ದುಃಖಗಳಿಗೆ ಕಾರಣವಾಗುತ್ತದೆ. ಸೇಡು ಕ್ಷಣಿಕ ತೃಪ್ತಿಯನ್ನು ನೀಡಿದರೂ ನಂತರದ ಪರಿಣಾಮಗಳು ಬಗೆಹರಿಯದ ಸಂಘರ್ಷಗಳಿಗೆ ಕಾರಣವಾಗುತ್ತವೆ. ಮುಯ್ಯಿಗೆ ಮುಯ್ಯಿ' ಎಂಬ ಪ್ರತೀಕಾರ ಕ್ರಮದ ಚಕ್ರ ನಿರಂತರ ಹಗೆತನದ ವಾತಾವರಣವನ್ನು ಸೃಷ್ಟಿಸುತ್ತದೆ. ಸೇಡಿನ ಕೆಡುಕನ್ನು ಖಂಡಿಸಿರುವ ಎಲ್ಲ ಮತ-ಧರ್ಮಗಳು, ಧರ್ಮಗುರುಗಳು,ಸೇಡು ಬಿಡು, ಕ್ಷಮೆಯ ಸರಪಳಿಯಿಂದ ಅದನ್ನು ಕಟ್ಟುಹಾಕು’ ಎಂದು ಉಪದೇಶಿಸಿದ್ದಾರೆ. ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದರೆ ಇನ್ನೊಂದು ಪಕ್ಷದ ಪ್ರತೀಕಾರದಿಂದ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ.
ಇತರರಿಂದ ಪಡೆದ ನೋವು ಗಾಯವನ್ನು ಮರೆತುಬಿಡು' ಎಂದು ಕುರಾನಿನ ಅನೇಕ ವಚನಗಳಲ್ಲಿ ಹೇಳಲಾಗಿದೆ.ಸಹನೆಯನ್ನು ಪಾಲಿಸಿದರೆ ಸಹನಶೀಲರ ಪಾಲಿಗೆ ಅದುವೇ ಉತ್ತಮ’ ಎಂದು ಕುರಾನಿನ ಅನ್ ಅಹತ್ ಅಧ್ಯಾಯದಲ್ಲಿದೆ. ಸೇಡು ತೀರಿಸಿಕೊಳ್ಳುವ ಪ್ರಚೋದನೆಯನ್ನು ವಿರೋಧಿಸುವ ಕುರಾನು, ತಾಳ್ಮೆ ಮತ್ತು ದೇವರ ತೀರ್ಪಿನಲ್ಲಿ ನಂಬಿಕೆ ಇಡಲು ಕರೆ ನೀಡುತ್ತದೆ.
ಸೇಡು ತೀರಿಸಿಕೊಳ್ಳುವ ಬದಲು ದೇವರ ತೀರ್ಪಿನ ಮೂಲಕ ನ್ಯಾಯ ಪಡೆಯಬೇಕು. ಅನ್ಯಾಯಕ್ಕೆ ಒಳಗಾದವರನ್ನು ದೇವರು ರಕ್ಷಿಸುತ್ತಾನೆ ಎಂಬ ಬಲವಾದ ನಂಬಿಕೆ ಇದ್ದರೆ, ಸೇಡಿಗಾಗಿ ಹಾತೊರೆಯದೆ ಕ್ಷಮಿಸಿದರೆ ಅದು ನಿಮಗೆ ಉತ್ತಮ. ಕ್ಷಮೆ ಹಾಗೂ ತಾಳ್ಮೆಯಿಂದ ಸೇಡನ್ನು ತೊರೆಯಬಹುದು. ಕ್ಷಮೆಯು ಪ್ರತಿಫಲದಾಯಕ ಕಾರ್ಯವಾಗಿದೆ. ಒಬ್ಬ ವ್ಯಕ್ತಿಯನ್ನು ಕ್ಷಮಿಸಿದಾಗ ಅವನ ಆತ್ಮಸಾಕ್ಷಿಯನ್ನು ಜಾಗೃತಗೊಳಿಸುತ್ತೀರಿ ಹಾಗೂ ಅವನಲ್ಲಿ ಪಶ್ಚಾತ್ತಾಪ ಭಾವನೆ ಉಂಟಾಗುತ್ತದೆ ಎಂದು ಮುಂತಾಗಿ ಕುರಾನಿನಲ್ಲಿ ಉಪದೇಶಿಸಲಾಗಿದೆ.
ಪ್ರವಾದಿವರ್ಯ ಮುಹಮ್ಮದ್ (ಸ) ಔದಾರ್ಯದ ಬಾಗಿಲು ಸದಾ ತೆರೆದಿರುತ್ತಿತ್ತು. ಯುದ್ಧದಲ್ಲಿ ಜಯ ಸಿಕ್ಕಾಗಲಂತೂ ಪ್ರವಾದಿವರ್ಯರು ಸಾರ್ವತ್ರಿಕ ಕ್ಷಮಾದಾನ ನೀಡುತ್ತಿದ್ದರು. `ಯಾರು ಕ್ಷಮಿಸುತ್ತಾರೋ ಅವನ ಪ್ರತಿಫಲವನ್ನು ಅಲ್ಲಾಹನು ಹೆಚ್ಚಿಸುತ್ತಾನೆ’ ಎಂದು ಹೇಳುತ್ತಿದ್ದರು. ಸೇಡು ತೀರಿಸಿಕೊಳ್ಳುವ ಬಯಕೆಯನ್ನು ಬಿಡುವ ಮೂಲಕ ಕೋಪ, ಅಸಮಾಧಾನಗಳಿಂದ ದೂರವಿರಬೇಕೆಂಬ ಅವರ ಬಯಕೆಯು ಅವರ ಸಾರ್ವತ್ರಿಕ ಕ್ಷಮಾದಾನದಲ್ಲಿ ಕಂಡಬರುತ್ತಿತ್ತು. ಎಳ್ಳಷ್ಟೂ ಸೇಡಿನ ಭಾವನೆ ಇರದ ಪ್ರವಾದಿವರ್ಯರು; ತಮ್ಮನ್ನು ಬೈಯುತ್ತಿದ್ದ, ಸುಳ್ಳುಗಾರನೆಂದು ಲೇವಡಿ ಮಾಡುತ್ತಿದ್ದವರನ್ನು ನಗುಮುಖದಿಂದ ಕ್ಷಮಿಸಿದರು. ಅಷ್ಟೇ ಅಲ್ಲ, ಪುತ್ರಿಯರಾದ ರುಖಿಯಾ, ಉಮ್ಮೆ ಕುಲ್ಸುಮ್‌ರನ್ನು ಹತ್ಯೆಗೈದ ಮುಆತ್ತವಾ ಎಂಬ ಕೊಲೆಗಡುಕರಿಗೆ, ಇತರ ರಕ್ತದಾಹಿಗಳಿಗೆಲ್ಲ ನಗುಮುಖದಿಂದ ಕ್ಷಮೆ ನೀಡಿದರು. ಕೋಪ ಬಂದಾಗ ಸೇಡಿಗೆ ಪೂರ್ಣವಿರಾಮ ನೀಡಲು ಕ್ಷಮೆಯನ್ನು ಆಯ್ಕೆ ಮಾಡಿಕೊಳ್ಳಿ. ಸೇಡಿನ ಭಾವನೆಯು ಹಿಂಸೆ-ದ್ವೇಷದ ಚಕ್ರಕ್ಕೆ ಕಾರಣವಾಗಬಹುದು. ಪ್ರತೀಕಾರದ ಸಂದರ್ಭ ಬಂದಾಗಲೆಲ್ಲ ಕ್ಷಮೆಯ ಮಾರ್ಗ ಹಿಡಿದರೆ ಸೇಡಿನ ಸಮಾಧಿಯಾಗುತ್ತದೆ. ಅಂತೆಯೇ ಸೇಡು ಅಲ್ಪವಿರಾಮ, ಕ್ಷಮೆ ಪೂರ್ಣವಿರಾಮ. ಹೀಗಾಗಿ ಸೇಡಿನ ಚಕ್ರ ತಪ್ಪಿಸಲು ಕ್ಷಮೆಯ ಪೂರ್ಣವಿರಾಮವೆಂಬ ಸರಪಳಿ ಅಗತ್ಯ.