SK Home Ad
Home ಅಪರಾಧ ಮೂವರು ವಿದ್ಯಾರ್ಥಿಗಳ ಮೃತದೇಹ ಪತ್ತೆ

ಮೂವರು ವಿದ್ಯಾರ್ಥಿಗಳ ಮೃತದೇಹ ಪತ್ತೆ

0
120

ಭಟ್ಕಳ: ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಕೋಲಾರ ಜಿಲ್ಲೆಯ ಮುಳಬಾಗಿಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರಲ್ಲಿ ಮಂಗಳವಾರ ನೀರಿನಲ್ಲಿ ಕೊಚ್ಚಿ ಹೋಗಿದ್ದ ಮೂವರು ವಿದ್ಯಾರ್ಥಿನಿಯರ ಮೃತದೇಹ ಬುಧವಾರ ಮಧ್ಯಾಹ್ನದ ವೇಳೆಗೆ ಪತ್ತೆಯಾಗಿದೆ. ಇದರಿಂದ ಸಮುದ್ರದಲ್ಲಿ ಮುಳುಗಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದಂತಾಗಿದೆ.
ಮಂಗಳವಾರ ಮುಳುಬಾಗಿಲಿನಿಂದ ಪ್ರವಾಸಕ್ಕೆ ಬಂದಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರಲ್ಲಿ ೭ ಬಾಲಕಿಯರು ಸಮುದ್ರದಂಚಿನಲ್ಲಿ ಆಟವಾಡುತ್ತಾ ಇರುವಾಗ ಅಬ್ಬರದ ಅಲೆಯೊಂದು ಬಂದು ಕೊಚ್ಚಿಕೊಂಡು ಹೋಗಿತ್ತು. ಇವರಲ್ಲಿ ನಾಲ್ವರನ್ನು ಸ್ಥಳೀಯ ಮೀನುಗಾರರು, ಲೈಫ್ ಗಾರ್ಡಗಳು ಸೇರಿ ತಕ್ಷಣ ಮೇಲಕ್ಕೆ ತಂದು ಆರ್.ಎನ್.ಎಸ್. ಆಸ್ಪತ್ರೆಗೆ ದಾಖಲಿಸಿದ್ದರು. ಅವರಲ್ಲಿ ಓರ್ವ ವಿದ್ಯಾರ್ಥಿನಿ ಮೃತಪಟ್ಟು ಮೂವರು ಚೇತರಿಸಿಕೊಂಡಿದ್ದರು. ಆದರೆ ಅವರೊಂದಿಗೆ ಕೊಚ್ಚಿ ಹೋಗಿದ್ದ ಇನ್ನೂ ಮೂವರ ಸುಳಿವು ದೊರೆತಿರಲಿಲ್ಲ. ಮಂಗಳವಾರ ಸಂಜೆಯಿಂದಲೇ ಸ್ಥಳೀಯ ಪೊಲೀಸರು, ಅಗ್ನಿಶಾಮದ ದಳ ಹಾಗೂ ಕರಾವಳಿ ಕಾವಲು ಪಡೆಯ ಪೊಲೀಸರು ಮೂವರು ವಿದ್ಯಾರ್ಥಿನಿಯರಿಗಾಗಿ ಹುಡುಕಾಟ ನಡೆಸಿದ್ದರು. ಬುಧವಾರ ಬೆಳಿಗ್ಗೆ ವಿದ್ಯಾರ್ಥಿನಿಯರಾದ ದೀಕ್ಷಾ(೧೫), ಲಾವಣ್ಯ(೧೫) ಹಾಗೂ ವಂದನಾ ಎಂ.(೧೫) ಇವರ ಮೃತದೇಹ ಸಮುದ್ರದಲ್ಲಿ ದೊರೆತಿದೆ.