ಶ್ರೀರಂಗಪಟ್ಟಣ : ಅ.06 ರಿಂದ 08 ರ ವರೆಗೆ ತಮಿಳುನಾಡಿನ ಹೊಸೂರಿನಲ್ಲಿ ನಡೆಯಲಿರುವ ಬಾಲಕಿಯರ ರಾಷ್ಟ್ರ ಮಟ್ಟದ “ಖೇಲೋ ಇಂಡಿಯಾ” ಖೋಖೋ ಪಂದ್ಯಾವಳಿಗೆ ಕರ್ನಾಟಕ ರಾಜ್ಯ ಸಬ್ ಜೂನಿಯರ್ ತಂಡದ 15 ಮಂದಿ ಆಟಗಾರರು ಗುರುವಾರ ತಮಿಳುನಾಡಿಗೆ ಪ್ರಯಾಣ ಬೆಳೆಸಿದರು.
ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ಕ್ರೀಡಾ ಸಂಸ್ಥೆಯ ಆವರಣದಲ್ಲಿ ಕ್ರೀಡಾ ಸಂಸ್ಥೆಯ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಕರ್ನಾಟಕ ತಂಡವನ್ನು ಅಭಿನಂಧಿಸಿ ಶುಭ ಹಾರೈಕೆಗಳೊಂದಿಗೆ ಬೀಳ್ಕೊಟ್ಟರು.
ಸಬ್ ಜೂನಿಯರ್ ಕರ್ನಾಟಕ ತಂಡದಲ್ಲಿ ಮದ್ದೂರು ತಾಲ್ಲೂಕಿನ ಕೊಕ್ಕರೆ ಬೆಳ್ಳೂರು ಶಾಲೆಯ ನಂದಿನಿ, ಶ್ರೀರಂಗಪಟ್ಟಣ ಸಂಯುಕ್ತ ಕರ್ನಾಟಕ ವರದಿಗಾರ ಅಲ್ಲಾಪಟ್ಟಣ ಸತೀಶ್ ರವರ ಪುತ್ರಿ ನ್ಯೂ ಆಕ್ಸ್ ಫರ್ಡ್ ಶಾಲೆಯ ವಿದ್ಯಾರ್ಥಿನಿ ಲೇಖನ.ಎಸ್, ಪಾಂಡವಪುರ ತಾಲ್ಲೂಕು ಕ್ಯಾತನಹಳ್ಳಿ ಗ್ರಾಮದ ಶಾಲೆಯ ಶ್ರಾವಂತಿ, ಪೂರ್ವಿಕ.ಕೆ.ಪಿ ತ್ರಿಶಿಕ .ಕೆ ಸೇರಿದಂತೆ ಮಂಡ್ಯ ಜಿಲ್ಲೆಯ ಐವರು ಬಾಲಕಿಯರು ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕರ್ನಾಟಕ ತಂಡವನ್ನು ಅಭಿನಂಧಿಸಿ ಮಾತನಾಡಿದ ಜಿಲ್ಲಾ ಖೋಖೋ ಅಕಾಡಮಿ ಕಾರ್ಯದರ್ಶಿ ಕೆ.ಪಿ.ರವಿಕಾಮಾರ್, ಕ್ಯಾತನಹಳ್ಳಿ ಗ್ರಾಮದ ಮಣ್ಣಿನಲ್ಲಿ ಕ್ರೀಡೆಯ ಮೆರಗು ಅಡಗಿದೆ. ಈ ಮಣ್ಣಿನಲ್ಲಿ ತರಭೇತಿ ಪಡೆದಿರುವ ಹಲವಾರು ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಇಲ್ಲಿ ತರಭೇತಿ ಮುಗಿಸಿ ತಮಿಳುನಾಡಿನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿರುವ ತಾವೆಲ್ಲರೂ, ಸಂಘಟನಾತ್ಮಕವಾಗಿ ಆಡುವ ಮೂಲಕ ತಂಡದ ಗೆಲುವಿಗೆ ಕಾರಣಕರ್ತರಾಗಬೇಕೆಂದು ಹುರಿದುಂಬಿಸಿದರು.
ತರಭೇತುದಾರ ಮನೋಹರ್ ಮಾತನಾಡಿ, ಒಂದು ವಾರದ ತರಭೇತಿಯಲ್ಲಿ ತಮ್ಮೆಲ್ಲರ ಆಟ ಗಮನಾರ್ಹವಾಗಿದ್ದು ಏಕಾಗೃತೆಯೊಂದಿಗೆ ಗೆಲುವನ್ನು ತಮ್ಮದಾಗಿಸಿಕೊಳ್ಳಬೇಕು. ಪಂದ್ಯದ ವೇಳೆ ಕೋಚ್ ಗಳು ನೀಡುವ ಸಲಹೆ- ಸೂಚನೆಗಳನ್ನು ಗಮನಿಸಿ ಎದುರಾಳಿ ತಂಡದ ವಿರುದ್ದ ರಚನಾತ್ಮಕ ಆಟವಾಡುವಂತೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ಸಂಸ್ಥೆಯ ಮುಖ್ಯಸ್ಥರು ಹಾಗೂ ಪ್ರೋತ್ಸಾಕರುಗಳಾದ ಕೆ.ಟಿ.ಗೋವಿಂದೇಗೌಡ, ಕೆ.ಪಿ.ಶಿವರಾಜ್, ಕುಮಾರಸ್ವಾಮಿ ಉಪಸ್ಥಿತರಿದ್ದು, ಕ್ರೀಡಾಪಟುಗಳಿಗೆ ಸಲಹೆ ಸೂಚನೆ ನೀಡಿದರು ಶುಭ ಹಾರೈಸಿದರು. ತಮಿಳುನಾಡಿಗೆ ತೆರಳಿದ ರಾಜ್ಯದ ತಂಡದೊಂದಿಗೆ ಕೋಚ್ ಆಗಿ ಮಾನ್ಯ, ಸಹಾಯಕ ಕೋಚ್ ಆಗಿ ಆದಿತ್ಯ ಮತ್ತು ವ್ಯವಸ್ಥಾಪಕರಾಗಿ ಭೂಮಿಕ ತೆರಳಿದರು.