Bigg Boss: ಖ್ಯಾತ ನಟ ವಿಜಯ್ ಸೇತುಪತಿ ನಿರೂಪಣೆ ಮಾಡುತ್ತಿರುವ ಬಿಗ್ ಬಾಸ್ ತಮಿಳು ಸೀಸನ್ 10ರ ವೇದಿಕೆಯಲ್ಲಿ ನಾಯಕತ್ವದ ಕುರಿತು ನೀಡಿದ ಹೇಳಿಕೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಬಿಗ್ ಬಾಸ್ ಸ್ಪರ್ಧಿಯೊಬ್ಬರ ಜೊತೆ ಲೀಡರ್ಶಿಪ್, ಜವಾಬ್ದಾರಿಗಳು ಮತ್ತು ನೀಡಿದ ಭರವಸೆಗಳ ಬಗ್ಗೆ ಮಾತನಾಡಿದ ಸೇತುಪತಿ, ಕಷ್ಟದ ಸಂದರ್ಭಗಳಲ್ಲಿ ನಾಯಕನಾದವನು ಹೇಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ವಿವರಿಸಿದ್ದರು.
‘ವಿಚಾರಿಸದೆ ಆತುರದಲ್ಲಿ ಭರವಸೆ ನೀಡುವುದು ಸರಿಯಲ್ಲ. ಸಮಸ್ಯೆಗಳು ಎದುರಾದಾಗ ಓಡಿಹೋಗುವುದು ನಿಜವಾದ ನಾಯಕತ್ವವಲ್ಲ. ವಿಪಕ್ಷಗಳ ಮೇಲೆ ಗೂಬೆ ಕೂರಿಸುವುದು ನಾಯಕನ ಲಕ್ಷಣವಲ್ಲ’ ಎಂದು ಸ್ಪರ್ಧಿಗೆ ಕಿವಿಮಾತು ಹೇಳಿದ್ದರು. ಬಿಗ್ ಬಾಸ್ ಮನೆಯೊಳಗಿನ ಆಟಕ್ಕೆ ಸಂಬಂಧಿಸಿದ ಈ ಮಾತುಗಳು ಹೊರಗಡೆ ರಾಜಕೀಯ ಸ್ವರೂಪ ಪಡೆದುಕೊಂಡಿವೆ. ಕೆಲ ವೀಕ್ಷಕರು ಈ ಹೇಳಿಕೆಯನ್ನು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರಿಗೆ ಲಿಂಕ್ ಮಾಡಿ, ಸೇತುಪತಿ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಆದರೆ, ವಿಜಯ್ ಸೇತುಪತಿ ತಮ್ಮ ಮಾತಿನಲ್ಲಿ ಸಿಎಂ ವಿಜಯ್ ಅವರ ಹೆಸರಾಗಲಿ ಅಥವಾ ಯಾವುದೇ ರಾಜಕೀಯ ಪಕ್ಷದ ಹೆಸರಾಗಲಿ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಬಿಗ್ ಬಾಸ್ ಪ್ರಸಾರ ಮಾಡುವ ವಿಜಯ್ ಟೆಲಿವಿಷನ್ ಕೂಡ ಸ್ಪಷ್ಟನೆ ನೀಡಿದ್ದು, ಈ ಹೇಳಿಕೆಯು ಹೊರಜಗತ್ತಿನ ಘಟನೆಗಳಿಗೆ ಕನೆಕ್ಟ್ ಆದರೆ ಅದು ಕೇವಲ ಕಾಕತಾಳೀಯ ಎಂದಿದೆ.
ಅಲ್ಲದೆ ವಿಜಯ್ ಸೇತುಪತಿ ಅವರು ನಟ ವಿಜಯ್ ಅವರನ್ನು ಹಲವು ವರ್ಷಗಳಿಂದ ಗೌರವಿಸುತ್ತಿದ್ದು, ಪ್ರೀತಿಯಿಂದ ‘ಅಣ್ಣ’ ಎಂದೇ ಕರೆಯುತ್ತಾರೆ. ಹೀಗಾಗಿ ಇದು ಯಾವುದೇ ಆಧಾರವಿಲ್ಲದ ಕೇವಲ ಊಹಾಪೋಹದ ವಿವಾದ ಎಂದು ಅಭಿಮಾನಿಗಳು ಸ್ಪಷ್ಟಪಡಿಸಿದ್ದಾರೆ.





















