SK Home Ad
Home ಸಿನಿ ಮಿಲ್ಸ್ ಅರ್ಜುನ್ ದೇವ್ ‘ಟಾಸ್’ಗೆ ಗಣೇಶ್ ದಂಪತಿ ಸಾಥ್: ಸೆ.18ಕ್ಕೆ ಅದ್ಧೂರಿ ಬಿಡುಗಡೆ

ಅರ್ಜುನ್ ದೇವ್ ‘ಟಾಸ್’ಗೆ ಗಣೇಶ್ ದಂಪತಿ ಸಾಥ್: ಸೆ.18ಕ್ಕೆ ಅದ್ಧೂರಿ ಬಿಡುಗಡೆ

0
72

ಮಂಗಳೂರು: ಕರಾವಳಿ ಭಾಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಹಿರಿಯ ರಂಗಭೂಮಿ ಕಲಾವಿದ, ನಟ ಹಾಗೂ ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರ ಪುತ್ರ ಅರ್ಜುನ್ ದೇವ್ ಇದೀಗ ನಟನಾಗಿ ಮಾತ್ರವಲ್ಲದೆ ನಿರ್ದೇಶಕರಾಗಿಯೂ ಹೊಸ ಜವಾಬ್ದಾರಿ ಹೊತ್ತುಕೊಂಡಿರುವ ‘ಟಾಸ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಏಕಕಾಲದಲ್ಲಿ ಸಿದ್ಧಗೊಂಡಿರುವ ಈ ಸಿನಿಮಾ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಅರ್ಜುನ್ ದೇವ್ ನಾಯಕನಾಗಿ ನಟಿಸುವುದರ ಜೊತೆಗೆ ಚಿತ್ರಕ್ಕೆ ನಿರ್ದೇಶನವನ್ನೂ ನೀಡಿದ್ದಾರೆ. ಅವರ ತಂದೆ ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಇತ್ತೀಚೆಗೆ ಚಿತ್ರದ ಅಧಿಕೃತ ಟೀಸರ್ ಬಿಡುಗಡೆಯಾಗಿದ್ದು, ಆಕ್ಷನ್ ಹಾಗೂ ಭಾವನಾತ್ಮಕ ಅಂಶಗಳ ಜೊತೆಗೆ ಚಿತ್ರದ ಕಥೆಯ ಕುರಿತ ಕುತೂಹಲ ಮೂಡಿಸಿದೆ.

ರೋಮ್-ಕಾಮ್ ಡ್ರಾಮಾ ಜೊತೆಗೆ ಆಕ್ಷನ್-ಥ್ರಿಲ್ಲರ್ : ‘ಟಾಸ್’ ಒಂದು ರೋಮ್-ಕಾಮ್ ಆಕ್ಷನ್ ಡ್ರಾಮಾ ಆಗಿದ್ದು, ಪ್ರೀತಿ, ಸಂಬಂಧಗಳು, ಭಾವನೆಗಳು ಹಾಗೂ ಮನರಂಜನೆಯ ಜೊತೆಗೆ ಆಕ್ಷನ್ ಮತ್ತು ಥ್ರಿಲ್ಲರ್ ಅಂಶಗಳನ್ನೂ ಒಳಗೊಂಡಿದೆ ಎಂದು ಚಿತ್ರತಂಡ ಹೇಳಿದೆ. ಕುಟುಂಬ ಸಮೇತ ಕುಳಿತು ನೋಡಬಹುದಾದ ಮನರಂಜನಾ ಸಿನಿಮಾವಾಗಿ ಚಿತ್ರವನ್ನು ರೂಪಿಸಲಾಗಿದೆ.

ಚಿತ್ರದಲ್ಲಿ ಸೂತೇಜ್ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಪ್ರಕಾಶ್ ತುಮಿನಾಡು ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಕೆಜಿಎಫ್’ ಖ್ಯಾತಿಯ ಗರೂಡ ರಾಮ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದು ಅವರ ತುಳು ಚಿತ್ರರಂಗದ ಪ್ರವೇಶವಾಗಿದೆ.

ಕನ್ನಡ-ತುಳು ಎರಡೂ ಭಾಷೆಗಳಲ್ಲಿ ಚಿತ್ರೀಕರಣ : ‘ಟಾಸ್’ ಅನ್ನು ಕನ್ನಡ ಮತ್ತು ತುಳು ಭಾಷೆಗಳಲ್ಲಿ ಪ್ರತ್ಯೇಕವಾಗಿ ಚಿತ್ರೀಕರಿಸಲಾಗಿದೆ. ಕೇವಲ ಒಂದು ಭಾಷೆಯ ಚಿತ್ರವನ್ನು ಮತ್ತೊಂದು ಭಾಷೆಗೆ ಡಬ್ ಮಾಡದೆ, ಎರಡೂ ಭಾಷೆಗಳ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಚಿತ್ರವನ್ನು ರೂಪಿಸಲಾಗಿದೆ. ಈ ಮೂಲಕ ಕರಾವಳಿಯ ತುಳು ಪ್ರೇಕ್ಷಕರ ಜೊತೆಗೆ ಕನ್ನಡ ಪ್ರೇಕ್ಷಕರನ್ನೂ ತಲುಪುವ ಉದ್ದೇಶ ಚಿತ್ರತಂಡದ್ದಾಗಿದೆ.

ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ಗಣೇಶ್ ಅವರ ಬೆಂಬಲವೂ ದೊರೆತಿದ್ದು, ಅವರು ‘ಗೋಲ್ಡನ್ ಮೂವೀಸ್’ ಮೂಲಕ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಚಿತ್ರವನ್ನು ವೀಕ್ಷಿಸಿ ಮೆಚ್ಚಿಕೊಂಡ ಬಳಿಕ ಗಣೇಶ್ ದಂಪತಿ ಚಿತ್ರಕ್ಕೆ ಸಾಥ್ ನೀಡಲು ಮುಂದಾಗಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

ಸಂಗೀತಕ್ಕೂ ವಿಶೇಷ ಗಮನ : ‘ಟಾಸ್’ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ಜೋಯೆಲ್ ಶರ್ಮನ್ ಡಿಸೋಜಾ ಛಾಯಾಗ್ರಹಣ ಹಾಗೂ ಯಶ್ವಿನ್ ಕೆ. ಶೆಟ್ಟಿಗಾರ್ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇತ್ತೀಚೆಗೆ ‘ಕಾನ ಕಾನ ಕಟ್ಯೆನೆ’ ಎಂಬ ತುಳು ವಿಡಿಯೊ ಹಾಡು ಬಿಡುಗಡೆಯಾಗಿದ್ದು, ಅರ್ಜುನ್ ದೇವ್ ಅವರೇ ಹಾಡಿಗೆ ಧ್ವನಿ ನೀಡಿದ್ದಾರೆ. ಹಾಡಿಗೆ ದೇವದಾಸ್ ಕಾಪಿಕಾಡ್ ಸಾಹಿತ್ಯ ಬರೆದಿದ್ದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ.

ಇದರ ಜೊತೆಗೆ ಚಿತ್ರದ ಮೊದಲ ಹಾಡು ‘Hello Hello Neelambari’ ಕೂಡ ಬಿಡುಗಡೆಯಾಗಿದ್ದು, ಕನ್ನಡ ಹಾಗೂ ತುಳು ಎರಡೂ ಆವೃತ್ತಿಗಳಲ್ಲಿ ಹಾಡು ಲಭ್ಯವಿದೆ. ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ, ಮಣಿಕಾಂತ್ ಕದ್ರಿ ಸಂಗೀತ ಹಾಗೂ ಅರ್ಮಾನ್ ಮಲಿಕ್ ಗಾಯನ ನೀಡಿದ್ದಾರೆ.

ನಟನೆಯೊಂದಿಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿರುವ ಅರ್ಜುನ್ ದೇವ್, ‘ಟಾಸ್’ ಮೂಲಕ ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಸಂಬಂಧಗಳು ಮತ್ತು ಭಾವನೆಗಳಿಗೆ ಒತ್ತು ನೀಡುವ ಕಥೆಯನ್ನು ನೀಡುವ ನಿರೀಕ್ಷೆಯಲ್ಲಿದ್ದಾರೆ. ಸೆಪ್ಟೆಂಬರ್ 18ರಂದು ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದ್ದು, ಕರಾವಳಿ ಮಾತ್ರವಲ್ಲದೆ ರಾಜ್ಯದಾದ್ಯಂತ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.