ಬೆಂಗಳೂರು: ಎಸ್ಐಆರ್ನಲ್ಲಿ ಮಾಹಿತಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ರಾಜ್ಯದ 43.81 ಲಕ್ಷ ಮತದಾರರ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಅಕ್ಟೋಬರ್ 22ರವರೆಗೆ ಗಡುವು ನೀಡಲಾಗಿದೆ.
ಕರ್ನಾಟಕದಲ್ಲಿ ಆಗಸ್ಟ್ 24ರಿಂದ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಬೆಂಗಳೂರಿನ ಚುನಾವಣಾ ನೋಂದಣಿ ಅಧಿಕಾರಿಗಳು (ಬಿಎಲ್ಓ) ಆಗಸ್ಟ್ 28ರಂದು ಮಾತ್ರ ನೋಟಿಸ್ಗಳನ್ನು ಸಿದ್ಧಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೋಟಿಸ್ ನೀಡುವ ಪ್ರಕ್ರಿಯೆ ಆರಂಭಿಸಿದ ಬಳಿಕ ವಿಚಾರಣೆ ನಡೆಸಲು ಒಂದು ವಾರದ ಕಾಲಾವಕಾಶ ಬೇಕಾಗುತ್ತದೆ. ಮೊದಲ ವಿಚಾರಣೆ ಏಳನೇ ದಿನವೇ ನಡೆಯಲು ಸಾಧ್ಯ. ಹೀಗಾಗಿ ಬೆಂಗಳೂರಿನಲ್ಲಿ ಸೆಪ್ಟೆಂಬರ್ 5ರಿಂದ ಮಾತ್ರ ವಿಚಾರಣೆ ಆರಂಭವಾಗಲಿದೆ. ಅಂದರೆ, ಈಗಾಗಲೇ ಬಿಗಿಯಾದ ಗಡುವಿನ ನಡುವೆ 10 ದಿನಗಳು ಕಳೆದುಹೋಗಿವೆ.
ಕರ್ನಾಟಕದಾದ್ಯಂತ 43.81 ಲಕ್ಷ ಮತದಾರರ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಬಿಎಲ್ಓಗಳಿಗೆ 60 ದಿನಗಳಿಗಿಂತ ಕಡಿಮೆ ಅವಧಿ ಮಾತ್ರ ಉಳಿಯಲಿದೆ. ಈ ಪೈಕಿ 24 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬೆಂಗಳೂರಿನಲ್ಲೇ ಕೇಂದ್ರೀಕೃತವಾಗಿವೆ. ನೋಟಿಸ್ಗಳನ್ನು ಸ್ವೀಕರಿಸಿ ವಿಚಾರಣೆಗೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಲು ಮತದಾರರಿಗೆ ಸಾಕಷ್ಟು ಸಮಯ ಸಿಗುವುದಿಲ್ಲ ಎಂಬ ಆತಂಕವೂ ವ್ಯಕ್ತವಾಗಿದೆ. ಹಲವು ಬೂತ್ ಮಟ್ಟದ ಅಧಿಕಾರಿಗಳು ಮಂಗಳವಾರವೇ ನೋಟಿಸ್ಗಳನ್ನು ಸ್ವೀಕರಿಸಿದ್ದು, ಅವುಗಳ ವಿತರಣೆ ಬುಧವಾರ ಆರಂಭವಾಗಿದೆ. ಇಷ್ಟು ದೊಡ್ಡ ಸಂಖ್ಯೆಯ ನೋಟಿಸ್ಗಳನ್ನು ವಿತರಿಸಲು ಶುಕ್ರವಾರದವರೆಗೂ ಸಮಯ ಬೇಕಾಗಬಹುದು ಎಂದು ಅವರು ಹೇಳಿದ್ದಾರೆ.
ಕೆಲವರಿಗೆ ವಿಚಾರಣೆಗೆ ಎರಡು ದಿನಗಳಷ್ಟು ಸಮಯ ಸಿಗಬಹುದು. ಕೆಲವರಿಗೆ ಒಂದು ದಿನವೂ ಸಿಗದಿರುವ ಸಾಧ್ಯತೆಯಿದೆ. ಆದರೆ ಸೆಪ್ಟೆಂಬರ್ 5 ಶನಿವಾರವಾಗಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಇಷ್ಟೊಂದು ಪ್ರಮಾಣದ ನೋಟಿಸ್ಗಳನ್ನು ಒಂದೇ ಸಮಯದಲ್ಲಿ ವಿತರಿಸಲು ಸಾಧ್ಯವಿಲ್ಲ ಎಂದು ಬಿಎಲ್ಓ ತಿಳಿಸಿದ್ದಾರೆ.
ದಾಖಲೆ ಸಲ್ಲಿಸಬೇಕೇ, ಬೇಡವೇ ಎಂಬ ಗೊಂದಲ: ಎನ್ಯೂಮರೇಷನ್ ಹಂತದಲ್ಲಿ ಹಲವು ಮತದಾರರಿಗೆ ಕರೆ ಮಾಡಿ, ಎನ್ಯೂಮರೇಷನ್ ಫಾರ್ಮ್ಗಳನ್ನು ಪಡೆದುಕೊಳ್ಳುವಂತೆ ತಿಳಿಸಲಾಗಿತ್ತು. ದಾಖಲೆಗಳನ್ನು ಸಲ್ಲಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಗೊಂದಲವೂ ಉಂಟಾಗಿತ್ತು. ಈ ಗೊಂದಲವೇ ಈಗ ನೋಟಿಸ್ಗಳಲ್ಲೂ ಮುಂದುವರಿದಿರುವಂತೆ ಕಾಣುತ್ತಿದೆ. ಕೆಲವು ಬಿಎಲ್ಓಗಳು ಮತದಾರರಿಂದ ದಾಖಲೆಗಳನ್ನು ಸಂಗ್ರಹಿಸಿಕೊಂಡಿದ್ದು, ಪ್ರಕ್ರಿಯೆ ವೇಗವಾಗಿ ಮುಗಿಯುತ್ತದೆ ಅಥವಾ ವ್ಯತ್ಯಾಸಗಳನ್ನು ಸರಿಪಡಿಸಬಹುದು ಎಂದು ಹೇಳಿದ್ದರು. ಮತ್ತೊಂದೆಡೆ, ಕೆಲ ಮತದಾರರಿಗೆ ಬುಧವಾರ ಕರೆ ಮಾಡಿ, ನೋಟಿಸ್ಬೇಕಿದ್ದರೆ ಮತಗಟ್ಟೆಗೆ ಬಂದು ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಇನ್ನೂ ಹಲವು ಪ್ರಕರಣಗಳಲ್ಲಿ ಮತದಾರರು ಈಗಾಗಲೇ ದಾಖಲೆಗಳನು ಬಿಎಲ್ಒಗಳಿಗೆ ನೀಡಿದ್ದರೂ, ಅವುಗಳನ್ನು ಏಕೆ ಸಂಗ್ರಹಿಸಲಾಗಿದೆ ಅಥವಾ ಈ ಹಂತದಲ್ಲಿ ಮತ್ತೆ ಸಲ್ಲಿಸಬೇಕೇ ಎಂಬುದು ಸ್ಪಷ್ಟವಾಗಿಲ್ಲ.
ನೋಟಿಸ್ಗಳಲ್ಲಿ ತಪ್ಪು ಮಾಹಿತಿ: ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬು ಕುಮಾರ್ ಅವರು, ತಾರ್ಕಿಕ ವ್ಯತ್ಯಾಸಗಳು ಕಂಡುಬಂದಿರುವ ಅಥವಾ 2002ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆಯಾಗದ ಮತದಾರರಿಗೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಅಗತ್ಯ ದಾಖಲೆಗಳನ್ನು ಈಗಾಗಲೇ ಸಲ್ಲಿಸಿದ್ದೇವೆ ಎಂದು ಹೇಳಿರುವ ಕೆಲವು ಮತದಾರರಿಗೂ, ಅವರು ಸಲ್ಲಿಸಿದ ದಾಖಲೆಗಳ ವಿವರಗಳು ಹೊಂದಿಕೆಯಾಗುತ್ತಿಲ್ಲ ಎಂಬ ಕಾರಣ ನೀಡಿ ನೋಟಿಸ್ಗಳು ಬಂದಿವೆ.



















