ದಾವಣಗೆರೆ: ಸಚಿವ ಸ್ಥಾನ ನೀಡದ್ದಕ್ಕೆ ಮುಖ್ಯಮಂತ್ರಿಗಳು ಕಾರಣ ಹೇಳಿ, ನಿಮಗೆ ಸಚಿವ ಸ್ಥಾನ ತಪ್ಪಿದೆ, ಹೊಸಬರನ್ನು ತೆಗೆದುಕೊಳ್ಳುತ್ತೇವೆ ಅಂತಾ ಹೇಳಿದ್ದರೆ ನಮಗೂ ಖುಷಿ ಇರುತಿತ್ತು ಎಂದು ಮಾಜಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಾವುದೇ ಮುಖ್ಯಮಂತ್ರಿ ತಮಗೆ ಬೇಕಾದಂತೆ ಸಂಪುಟ ರಚನೆ ಮಾಡುತ್ತಾರೆ. ಹೀಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಸಿಗದ ಬಗ್ಗೆ ಯಾವುದೇ ಬೇಸರವಿಲ್ಲ. ಆದರೆ ಇನ್ನಷ್ಟು ಗೌರವಯುತವಾಗಿ ನಡೆಸಿಕೊಳ್ಳಬಹುದಿತ್ತು. ಸಚಿವ ಸ್ಥಾನ ನೀಡಲಾಗದ ಕಾರಣ ತಿಳಿಸಿದ್ದರೆ ಚೆನ್ನಾಗಿತ್ತು ಎಂದರು.
ವೈರಲ್ ಆಗಿರುವ ಆಡಿಯೋದಲ್ಲಿ ನಾನು ಹೈಕಮಾಂಡ್ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್, ನಮ್ಮ ನಾಯಕರು ಏನಾದರೂ ಹೇಳಿದರೆ, ಅದಕ್ಕೆ ವಿರೋಧಿಸುವ ಅಥವಾ ಪಕ್ಷದ ಇಮೇಜ್ಗೆ ಧಕ್ಕೆ ತರುವ ವ್ಯಕ್ತಿ ನಾನಲ್ಲ ಎಂದರು.
ಗಾಂಧೀಜಿ, ಕೆಂಪೇಗೌಡರಂತಹ ಮಹನೀಯರ ಮೇಲೂ ಆರೋಪಗಳು ಬಂದಿವೆ. ಅದೇ ರೀತಿ ಈಗ ನನ್ನ ಮೇಲೂ ಆರೋಪ ಮಾಡಲಾಗುತ್ತಿದೆ. ನಾನು ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ಅನಗತ್ಯವಾಗಿ ನನ್ನ ಹೆಸರನ್ನು ಎಳೆದು ತರುವುದು ಸರಿಯಲ್ಲ ಎಂದು ಹೇಳಿದರು.





















