ಕಲಬುರಗಿ: ಕಲ್ಯಾಣ ಕರ್ನಾಟಕದ 15 ಸಾವಿರ ಶಾಲಾ ಶಿಕ್ಷಕರ ನೇಮಕ ಸೇರಿದಂತೆ ಮುಂದಿನ ಮೂರು ತಿಂಗಳೊಳಗಾಗಿ 57 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತಿಳಿಸಿದರು.
ಕಂದಾಯ, ಕೃಷಿ, ಗೃಹ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಸೇರಿ ಎಲ್ಲ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಅವರು ಪ್ರಕಟಿಸಿದರು.
ಮುಖ್ಯಮಂತ್ರಿಯಾದ ಬಳಿಕ ಬೀದರ ಮೂಲಕ ಮೊದಲ ಕಲ್ಯಾಣ ಕರ್ನಾಟಕ ಪ್ರವಾಸ ಆರಂಭಿಸಿರುವ ಡಿ.ಕೆ. ಶಿವಕುಮಾರ ಮಂಗಳವಾರ ಕಲಬುರಗಿಯಲ್ಲಿ ಪ್ರಗತಿ ಪರಿಶೀಲನೆ, ಬರ ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಶರಣಬಸವೇಶ್ವರ ದೇವಾಸ್ಥಾನ, ಹಿಂದಿನ 8ನೇ ಪೀಠಾಧಿಪತಿ ಲಿಂ. ಡಾ. ಶರಣಬಸವಪ್ಪ ಅಪ್ಪಾ ಅವರ ಗದ್ದುಗೆ ದರ್ಶನ ಮತ್ತು ದಾಸೋಹ ಮಹಾಮನೆಗೆ ಭೇಟಿ ನೀಡಿದರು. ಖಾಜಾ ಬಂದನವಾಜ್ ದರ್ಗಾಕ್ಕೆ ತೆರಳಿ ದರ್ಶನ ಪಡೆದರು. ಗುಲಬರ್ಗಾ ವಿವಿ ಕ್ಯಾಂಪಸ್ನಲ್ಲಿ ಮೂರು ತಾಸುಗಳಿಗೂ ಹೆಚ್ಚು ಕಾಲ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನೆ ಕೈಗೊಂಡರು.
ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ಬರ ಪರಿಸ್ಥಿತಿ ನಿರ್ವಹಣೆ, ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ನಿಶ್ಚಿತ. ಆದರೆ ಅಭಿವೃದ್ಧಿ ವಿಚಾರದಲ್ಲಿ ನೆಪ ಕೇಳಲು ನಾನು ಸಿದ್ಧನಿಲ್ಲ. ಪರಿಶುದ್ಧ, ಜನಪರ ಮತ್ತು ಸಮಾನತೆಯ ಆಡಳಿತವೇ ನನ್ನ ಮುಂದಿನ ಗುರಿ. ಈ ನಿಟ್ಟಿನಲ್ಲಿ ಅಧಿಕಾರಿ ವರ್ಗದವರು ಕಟ್ಟಕಡೆಯ ವ್ಯಕ್ತಿಗೂ ನಾಗರಿಕ ಹಕ್ಕು ತಲುಪಿಸುವ ರೀತಿಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ತಾಕೀತು ಮಾಡಿದರು.






















