ಮೈಸೂರು: ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನ ಈಗ ಮುಗಿದ ಅಧ್ಯಾಯ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದಲ್ಲಿನ ಅಡ್ಡ ಮತದಾನದ ಗೊಂದಲಗಳು ಈಗ ಮುಗಿದಿವೆ. ಎಲ್ಲಾ ವಿಚಾರವನ್ನ ನಾವು ಹೈಕಮಾಂಡ್ಗೆ ತಲುಪಿಸಿದ್ದೇವೆ. ಮತ್ತೆ ಅದರ ಬಗ್ಗೆ ಚರ್ಚೆ ಬೇಡ ಎಂದರು.
ಡಿ.ವಿ. ಸದಾನಂದ ಗೌಡ ಆಡಿಯೋ ವಿಚಾರದಲ್ಲಿ ಆ ಧ್ವನಿ ನನ್ನದಲ್ಲ ಎಂದು ಅವರೇ ಹೇಳಿದ್ದಾರೆ. ಧ್ವನಿ ಅವರದಲ್ಲ ಅಂದ ಮೇಲೆ ಮತ್ತೆ ಅದರ ಬಗ್ಗೆ ಚರ್ಚೆ ಯಾಕೆ. ಖುದ್ದು ಸದಾನಂದ ಗೌಡರೇ ಆ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ಹೇಳಿದರು.
ಶಾಸಕ ವಿಶ್ವನಾಥ್ ಜೊತೆಯೂ ನಾನು ಮಾತನಾಡಿದ್ದೇನೆ. ಒಂದು ಪಕ್ಷ ಅಂದ ಮೇಲೆ ಸಣ್ಣ ಪುಟ್ಟ ಗೊಂದಲಗಳು ಸಹಜ. ಅವೆಲ್ಲವನ್ನು ನಾನು ನಿಭಾಯಿಸಿಕೊಂಡೆ ಪಕ್ಷ ಕಟ್ಟುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಡದಿ ಟೌನ್ಶಿಪ್ ವಿಚಾರದಲ್ಲಿ ರಾಜ್ಯ ಸರ್ಕಾರ ತಾನು ಮಾಡಿದ್ದೆಲ್ಲ ಸರಿ ಅನ್ನೋ ಧೋರಣೆಯಲ್ಲಿದೆ. ಈ ಧೋರಣೆ ಒಳ್ಳೆಯದಲ್ಲ. ಟೌನ್ಶಿಪ್ಗೆ ಶೇಕಡ 79ರಷ್ಟು ರೈತರ ವಿರೋಧವಿದೆ. ಆದರೂ ಸರ್ಕಾರ ರೈತರ ವಿರೋಧವಿಲ್ಲ ಎಂದು ಸುಳ್ಳು ಹೇಳುತ್ತಿದೆ ಎಂದರು.
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದ ದಿನದಿಂದ ಟೌನ್ಶಿಪ್ ಬಗ್ಗೆ ಬಹಳ ಆತುರದಲ್ಲಿದ್ದಾರೆ. ಬಿಜೆಪಿ ರೈತರ ಪರ, ಬರುವ ಅಧಿವೇಶನದಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.






















