SK Home Ad
Home ಸಿನಿ ಮಿಲ್ಸ್ ಬಿಗ್ ಶಾಕ್: ನಟ ಪ್ರಕಾಶ್ ರಾಜ್‌ಗೆ ಕೋರ್ಟ್‌ನಿಂದ ಅರೆಸ್ಟ್ ವಾರೆಂಟ್; ಕಾರಣವೇನು ಗೊತ್ತಾ?

ಬಿಗ್ ಶಾಕ್: ನಟ ಪ್ರಕಾಶ್ ರಾಜ್‌ಗೆ ಕೋರ್ಟ್‌ನಿಂದ ಅರೆಸ್ಟ್ ವಾರೆಂಟ್; ಕಾರಣವೇನು ಗೊತ್ತಾ?

0
34

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರಾಜ್‌ ಕಾನೂನು ಸಂಕಷ್ಟ ಎದುರಾಗಿದೆ. ನಿಯಮಬಾಹಿರವಾಗಿ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಹೊಂದಿದ್ದಾರೆ ಎಂಬ ಗಂಭೀರ ಆರೋಪದ ಮೇಲೆ ಬೆಂಗಳೂರಿನ 48ನೇ ಎಸಿಜಿಎಂ (ACGM) ನ್ಯಾಯಾಲಯವು ಅವರ ವಿರುದ್ಧ ಬಂಧನ ವಾರೆಂಟ್ (ಅರೆಸ್ಟ್ ವಾರೆಂಟ್) ಜಾರಿಗೊಳಿಸಿದೆ.

ದೇಶದ ಚುನಾವಣಾ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿಗೆ ಒಂದೇ ವೋಟರ್ ಐಡಿ ಇರಲು ಅವಕಾಶವಿದೆ. ಆದ್ರೆ ನಟ ಪ್ರಕಾಶ್ ರಾಜ್ ಏಕಕಾಲದಲ್ಲಿ ನಾಲ್ಕು ಬೇರೆ ಬೇರೆ ಕಡೆಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಆರೋಪಿಸಿ ವಕೀಲ ದಿಲೀಪ್ ಕುಮಾರ್, ಈ ಹಿಂದೆ ಕಾನೂನು ಹೋರಾಟ ಆರಂಭಿಸಿದ್ದರು.

ದೂರುದಾರರಾದ ದಿಲೀಪ್ ಕುಮಾರ್ ಮೊದಲಿಗೆ 2019 ರಲ್ಲಿ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದರು. ಆದ್ರೆ ಪೊಲೀಸರಿಂದ ಯಾವುದೇ ಸೂಕ್ತ ಕ್ರಮ ಜಿರುಗಿರಲಿಲ್ಲ. ಆನಂತರ ನಗರ ಪೊಲೀಸ್ ಆಯುಕ್ತರಿಗೆ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೂ ಲಿಖಿತ ದೂರುಗಳನ್ನು ಸಲ್ಲಿಸಿದ್ದರು. ಅಲ್ಲಿಯೂ ಯಾವುದೇ ಪ್ರಗತಿ ಕಾಣದಿದ್ದಾಗ, ದಿಲೀಪ್ ಕುಮಾರ್ ನೇರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ನಂತರ ದೂರಿನ ಸುದೀರ್ಘ ಪರಿಶೀಲನೆ ನಡೆಸಿದ ಬೆಂಗಳೂರಿನ 48ನೇ ಎಸಿಜಿಎಂ ನ್ಯಾಯಾಲಯವು ಆರೋಪದ ಗಂಭೀರತೆಯನ್ನು ಪರಿಗಣಿಸಿ, ನಟ ಪ್ರಕಾಶ್ ರಾಜ್ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದೆ. “ಒಬ್ಬ ಪ್ರಜೆಗೆ ಒಂದೇ ಮತದಾನದ ಹಕ್ಕು ಮತ್ತು ಐಡಿ ಇರಬೇಕು. ಆದ್ರೆ ಕಾನೂನು ಉಲ್ಲಂಘಿಸಿರುವ ಕಾರಣ ಈ ದೂರು ನೀಡಬೇಕಾಯಿತು” ಎಂದು ವಕೀಲ ದಿಲೀಪ್ ಕುಮಾರ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ನ್ಯಾಯಾಲಯದ ಈ ಆದೇಶದಿಂದಾಗಿ ನಟ ಪ್ರಕಾಶ್ ರಾಜ್ ಮುಂಬರುವ ದಿನಗಳಲ್ಲಿ ಕಾನೂನಿನ ಸಂಕೋಲೆ ಬಿಗಿಯಾಗುವ ಸಾಧ್ಯತೆಯಿದೆ.