ಕೊಪ್ಪಳ: ಗಂಗಾವತಿ ತಾಲೂಕಿನ ಐತಿಹಾಸಿಕ ಋಷ್ಯಮುಖ ಪರ್ವತದ ಸುಗ್ರೀವ-ಆಂಜನೇಯ ದೇವಾಲಯದ ಅರ್ಚಕ ಮಹಾಂತ ಆನಂದಗಿರಿ ಬಾಬಾ (95) ನಿಧನರಾಗಿದ್ದಾರೆ.
ಹಲವು ವರ್ಷಗಳಿಂದ ಅನಾರೋಗ್ಯಪೀಡಿತರಾಗಿದ್ದ ಆನಂದಗಿರಿ ಬಾಬಾ ಅವರು ಕಳೆದ 50 ವರ್ಷಗಳಿಂದ ಸುಗ್ರೀವ-ಆಂಜನೇಯ ದೇವಾಲಯದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯ ಮಾಡುತ್ತಿದ್ದರು.
ಉತ್ತರ ಭಾರತದಿಂದ 1950ರಲ್ಲಿ ಕಮಲಾಪುರ ಹತ್ತಿರ ಇರುವ ಮಧುವನಕ್ಕೆ ಆಗಮಿಸಿದ್ದ ಬಾಬಾ, ಪಂಪ ಸರೋವರ ಕಿಷ್ಕಿಂದ ಅಂಜನಾದ್ರಿ, ತಿರುಮಲಾಪುರ ಮತ್ತು ಜಂಗ್ಲಿ ರಂಗಪುರ ಆಂಜನೇಯನ ಸನ್ನಿಧಿಯಲ್ಲಿ ಧಾರ್ಮಿಕ ಪೂಜಾ ಕಾರ್ಯಗಳನ್ನು ಕೈಗೊಂಡಿದ್ದರು.
ಬಾಬಾ ನಿಧನ ಸುದ್ದಿ ತಿಳಿದು ಗಂಗಾವತಿ, ಹೊಸಪೇಟೆ, ಹನುಮನಹಳ್ಳಿ, ಆನೆಗೊಂದಿ, ಸಾಣಪುರ, ರಾಂಪುರ, ಜಂಗ್ಲಿ ರಂಗಪುರ, ಮಲ್ಲಾಪುರ ಸೇರಿದಂತೆ ಹಲವೆಡೆಗಳಿಂದ ಭಕ್ತರು ಆಗಮಿಸಿ ಬಾಬಾ ಅವರ ಅಂತಿಮ ದರ್ಶನ ಪಡೆದರು.






















