Home Advertisement
Home ಸುದ್ದಿ ದೇಶ ಪಂಜಾಬ್‌ ಅವಳಿ ಸ್ಫೋಟ: BJP ವಿರುದ್ಧ CM ಮಾನ್ ಗಂಭೀರ ಆರೋಪ

ಪಂಜಾಬ್‌ ಅವಳಿ ಸ್ಫೋಟ: BJP ವಿರುದ್ಧ CM ಮಾನ್ ಗಂಭೀರ ಆರೋಪ

0
65

ಪಂಜಾಬ್: ಪಂಜಾಬ್‌ನ ಅಮೃತಸರ ಮತ್ತು ಜಲಂಧರ್ ನಗರಗಳಲ್ಲಿ ನಡೆದ ಅವಳಿ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರು ಬಿಜೆಪಿ ವಿರುದ್ಧ ತೀವ್ರ ಆರೋಪಗಳನ್ನು ಹೊರಿಸಿದ್ದಾರೆ. ಈ ಸ್ಫೋಟಗಳನ್ನು 2027ರ ವಿಧಾನಸಭಾ ಚುನಾವಣೆಗೆ ಬಿಜೆಪಿ ನಡೆಸುತ್ತಿರುವ “ರಾಜಕೀಯ ತಂತ್ರ” ಎಂದು ಅವರು ಕರೆದಿದ್ದಾರೆ.

ರೋಪರ್‌ನ ಆನಂದಪುರ ಸಾಹಿಬ್‌ನಲ್ಲಿ ತಮ್ಮ ‘ಶುಕ್ರನ ಯಾತ್ರೆ’ ಆರಂಭಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಚುನಾವಣಾ ಲಾಭಕ್ಕಾಗಿ ಬಿಜೆಪಿ ಹಿಂಸೆ ಮತ್ತು ಭಯದ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿದರು. ಪಂಜಾಬ್ ಜನತೆ ಶಾಂತಿಯನ್ನು ಬಯಸುತ್ತಾರೆ, ಇಂತಹ ಪ್ರಯತ್ನಗಳನ್ನು ಅವರು ಒಪ್ಪುವುದಿಲ್ಲ ಎಂದು ಹೇಳಿದರು.

ಮಂಗಳವಾರ ರಾತ್ರಿ ಎರಡು ಪ್ರತ್ಯೇಕ ಸ್ಫೋಟ ಘಟನೆಗಳು ನಡೆದಿದೆ. ಜಲಂಧರ್‌ನ BSF Chowk ಬಳಿ ರಾತ್ರಿ 8 ಗಂಟೆ ಸುಮಾರಿಗೆ ನಿಲ್ಲಿಸಿದ್ದ ಸ್ಕೂಟರ್ ಸ್ಫೋಟಗೊಂಡಿದ್ದು, ಅಗ್ನಿಗಾಹುತಿಯಾಗಿದೆ. ಈ ಸ್ಫೋಟದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ ಹಿಡಿಯಲ್ಪಟ್ಟಿವೆ. ಮತ್ತೊಂದು ಸ್ಫೋಟ ಅಮೃತಸರದ ಖಾಸಾ ಪ್ರದೇಶದ ಸೇನಾ ಶಿಬಿರದ ಬಳಿ ರಾತ್ರಿ 10:30ರ ಸುಮಾರಿಗೆ ಸಂಭವಿಸಿದ್ದು, ಸ್ಫೋಟದ ಶಬ್ದವು ಸುಮಾರು 1.5 ಕಿಮೀ ದೂರವರೆಗೆ ಕೇಳಿಬಂದಿದೆ.

ಈ ಎರಡೂ ಸ್ಥಳಗಳು ರಕ್ಷಣಾ ಮತ್ತು ಅರೆಸೈನಿಕ ಸಂಸ್ಥೆಗಳ ಸಮೀಪದಲ್ಲಿರುವುದರಿಂದ ಭದ್ರತಾ ಸಂಸ್ಥೆಗಳು ಹೆಚ್ಚಿನ ಎಚ್ಚರಿಕೆ ವಹಿಸಿವೆ. ಪ್ರಾಥಮಿಕ ತನಿಖೆಯ ಪ್ರಕಾರ, ಗೋಡೆಯ ಕಡೆಗೆ ಎಸೆಯಲ್ಪಟ್ಟ ವಸ್ತುವಿನಿಂದ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.

ಫಾರೆನ್ಸಿಕ್ ತಂಡಗಳು ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿವೆ. ತನಿಖೆಯಲ್ಲಿ ಸ್ಥಳೀಯ, ರಾಜಕೀಯ ಮತ್ತು ಗಡಿಯಾಚೆಗಿನ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಕೆಲ ಭದ್ರತಾ ಸಂಸ್ಥೆಗಳು ಪಾಕಿಸ್ತಾನ ಮೂಲದ ಶಂಕಿತ ಸಂಪರ್ಕಗಳನ್ನೂ ಪರಿಶೀಲಿಸುತ್ತಿವೆ, ಆದರೆ ಇದನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಲಾಗಿಲ್ಲ.

ಇದಕ್ಕೂ ಮಧ್ಯೆ, ಮುಖ್ಯಮಂತ್ರಿ ಮಾನ್ ಅವರು, “ಪಂಜಾಬ್‌ನಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ನಾವು ಸಹಿಸುವುದಿಲ್ಲ. ಬಿಜೆಪಿ ಹಿಂಸಾಚಾರವನ್ನು ರಾಜಕೀಯ ಸಾಧನವಾಗಿ ಬಳಸಬಾರದು” ಎಂದು ಎಚ್ಚರಿಕೆ ನೀಡಿದ್ದಾರೆ.

2027ರ ವಿಧಾನಸಭಾ ಚುನಾವಣೆಗೆ ಮುನ್ನ ಪಂಜಾಬ್‌ನಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿರುವ ಹಿನ್ನೆಲೆ, ಈ ಘಟನೆಗಳು ರಾಜಕೀಯ ವಾತಾವರಣವನ್ನು ಮತ್ತಷ್ಟು ಗಂಭೀರಗೊಳಿಸಿವೆ.