Home Advertisement
Home ತಾಜಾ ಸುದ್ದಿ ಮಂದಗತಿಯ ಸೇತುವೆ ನಿರ್ಮಾಣ : ಹಳ್ಳ ದಾಟಲು ಹರೋಹರ

ಮಂದಗತಿಯ ಸೇತುವೆ ನಿರ್ಮಾಣ : ಹಳ್ಳ ದಾಟಲು ಹರೋಹರ

0
165

ಇಳಕಲ್ : ತಾಲೂಕಿನ ಕರಡಿ ಗ್ರಾಮದ ಬಳಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು ಮಳೆ ಬಂದು ನೀರು ಹರಿದರೆ ಆ ಹಳ್ಳವನ್ನು ದಾಟಲು ಜನರು ಹರೋಹರ ಎನ್ನಬೇಕಾಗುತ್ತದೆ.
ಈ ಗ್ರಾಮದ ಕಡೆಯಿಂದ ದಾಸಬಾಳ, ಪಾಲ್ತಿ ಮುಂತಾದ ಗ್ರಾಮಗಳಿಗೆ ಹೋಗಬೇಕಾದರೆ ಮಹಿಳೆಯರು ಮತ್ತು ಮಕ್ಕಳು ಮೈಯೆಲ್ಲಾ ಕಣ್ಣಾಗಿಸಿಕೊಂಡು ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ , ಅದರಲ್ಲಿಯೂ ಮಳೆ ಬಂದರಂತೂ ಒದ್ದಾಡುತ್ತ ಸಾಗಬೇಕಾದ ಪರಿಸ್ಥಿತಿ ಇಲ್ಲಿ ನಿರ್ಮಾಣ ಆಗುತ್ತಿದೆ. ದೊಡ್ಡ ದೊಡ್ಡ ವಾಹನಗಳನ್ನು ಪರ್ಯಾಯ ರಸ್ತೆಯಲ್ಲಿ ಚಾಲಕರು ಅಷ್ಟಿಷ್ಟು ಧೈರ್ಯ ಮಾಡಿ ಚಾಲಕರು ಒಯ್ದರೂ ದ್ವಿಚಕ್ರ ವಾಹನಗಳ ಚಾಲಕರು ಜೀವ ಕೈಯಲ್ಲಿ ಹಿಡಿದುಕೊಂಡೇ ಹೋಗಬೇಕಾಗುತ್ತದೆ. ಈಗ ಸುರಿಯುತ್ತಿರುವ ಮಳೆ ನೀರಿನ ಜೊತೆಗೆ ಕಾಲುವೆ ನೀರು ಸಹ ಈ ಹಳ್ಳದತ್ತ ಬರುತ್ತಿದ್ದು ಇಲ್ಲಿನ ಗ್ರಾಮಸ್ಥರಿಗೆ ನುಂಗಲಾರದ ತುತ್ತಾಗಿದೆ. ಜನ ಪ್ರತಿನಿಧಿಗಳು ಅಧಿಕಾರಿಗಳು ಇತ್ತ ಗಮನ ಹರಿಸಿ ಸೇತುವೆ ಕಾಮಗಾರಿ ಯನ್ನು ಕೂಡಲೇ ಮುಗಿಸುವತ್ತ ಕ್ರಮ ಕೈಗೊಳ್ಳಬೇಕಾಗಿದೆ ಇಲ್ಲದಿದ್ದರೆ ಜನರ ಗೋಳು ಹೀಗೆಯೇ ಸಾಗುತ್ತದೆ.