Home Advertisement
Home ನಮ್ಮ ಜಿಲ್ಲೆ ಕೊಪ್ಪಳ ಆರ್ಥಿಕತೆ ಸುಧಾರಿಸಿದರೆ ಪುರುಷರಿಗೂ ಬಸ್ ಉಚಿತ‌

ಆರ್ಥಿಕತೆ ಸುಧಾರಿಸಿದರೆ ಪುರುಷರಿಗೂ ಬಸ್ ಉಚಿತ‌

0
235

ಯಲಬುರ್ಗಾ(ಕೊಪ್ಪಳ): ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದರೆ, ಪುರುಷರಿಗೂ ಬಸ್ ಪ್ರಯಾಣ ಉಚಿತ ಮಾಡಲಾಗುವುದು ಎಂದು ಯಲಬುರ್ಗಾ ಶಾಸಕ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು.
ಹಿರೇವಂಕಲಕುಂಟಾ ಗ್ರಾಮದಲ್ಲಿ ಮಾತನಾಡಿದ ಅವರು, ನನ್ನನ್ನು ಮಂತ್ರಿ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಈಗಾಗಲೇ ಎಲ್ಲವನ್ನೂ ಮಾಡಿದ್ದಾರೆ. ನನ್ನನ್ನು ಹಣಕಾಸು ಸಚಿವನನ್ನಾಗಿ ಮಾಡಿದರೆ, ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತೇನೆ. ಆರ್ಥಿಕ ಪರಿಸ್ಥಿತಿ ಸುಧಾರಣೆಯಾದರೆ ಪುರುಷರಿಗೂ ಬಸ್ ಪ್ರಯಾಣ ಉಚಿತ ಮಾಡುತ್ತೇವೆ ಎಂದರು.
ನಾವು ಯಾರೂ ಗ್ಯಾರಂಟಿಗೆ ವಿರೋಧ ಇಲ್ಲ. ನಾನು ಏನೋ ಹೇಳುತ್ತೇನೆ. ನಾನು ಉಲ್ಟಾ ಹೇಳುವುದಿಲ್ಲ. ನಾನು ನೇರವಾಗಿ ಮಾತನಾಡುತ್ತೇನೆ. ನಮ್ಮ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಎಲ್ಲ ಅಭಿವೃದ್ಧಿ ಕೆಲಸಗಳಾಗುತ್ತಿವೆ. ಹಿಂದಿನ ಸರ್ಕಾರ ಪಿಡಬ್ಲ್ಯೂಡಿಯಲ್ಲಿ ಮತ್ತು ಸಣ್ಣ ನೀರಾವರಿ ಪೆಂಡಿಂಗ್ ಬಿಲ್ ಇತ್ತು. ಎರಡು ಲಕ್ಷ ಕೋಟಿ ರೂ. ನಮ್ಮ ತಲೆ ಮೇಲೆ ಬಿಜೆಪಿಯವರು ಹಾಕಿದರು. ನಮ್ಮ ಸರ್ಕಾರ ಅಭಿವೃದ್ಧಿಯಲ್ಲಿ ಹಿನ್ನಡೆ ಇಲ್ಲ ಎಂದು ತಿಳಿಸಿದರು.
ಇನ್ನೂ ಮೂರು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿತ್ತಾರೆ. ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ನೀರಾವರಿ ಮಾಡುವುದು ಸುಲಭವಲ್ಲ. ನರೇಂದ್ರ ಮೋದಿ ಯಾವ ರಾಜ್ಯದ ಒಬ್ಬ ಸಿಎಂ ಅನ್ನೂ ಕರೆದು ಮಾತನಾಡಿಲ್ಲ. ತಾಂತ್ರಿಕ ಸಮಸ್ಯೆಗಳು ಇರುತ್ತವೆ. ಬಿಜೆಪಿಯವರು ಸುಮ್ಮನೇ ಆರೋಪ ಮಾತನಾಡುತ್ತಾರೆ. ಜಲ ಹಂಚಿಕೆ ಕಾನೂನು ಬಗ್ಗೆ ತಿಳಿದುಕೊಳ್ಳಬೇಕು. ಅಧ್ಯಯನ ಮಾಡಬೇಕು ಎಂದು ಹೇಳಿದರು.