ಮಡಿಕೇರಿ: ಕಾಫಿ ತೋಟದ ವೀಕ್ಷಣೆಗೆಂದು ತೆರಳಿದ್ದ ಮಹಿಳೆಯೊಬ್ಬರು ಕಾಡಾನೆಯೊಂದರ ಹಠಾತ್ ದಾಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕೊಡಗಿನ ತಿತಿಮತಿ ಬಳಿಯ ಕೋಣನಕಟ್ಟೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ನಾಗಲ್ಯಾಂಡ್ ಕೇಡರ್ ಹಿರಿಯ ಐಪಿಎಸ್ ಅಧಿಕಾರಿ ಐಜಿಪಿ ಅಣ್ಣಳಮಾಡ ಸುನೀಲ್ ಅಚ್ಚಯ್ಯ ಎಂಬವರ ಪತ್ನಿ ಸಂಧ್ಯಾ ಅಚ್ಚಯ್ಯ (51) ಮೃತಪಟ್ಟವರು. ಸಂಧ್ಯಾ ಅವರೊಟ್ಟಿಗಿದ್ದ ಇಬ್ಬರು ಕಾರ್ಮಿಕರಿಗೆ ಗಾಯಗಳಾಗಿದ್ದು ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಂಧ್ಯಾ ತಮ್ಮ ಇಬ್ಬರು ಪುತ್ರಿಯರ ಜೊತೆಯಲ್ಲಿ ಬೆಂಗಳೂರಿನ ಸುಲ್ತಾನ್ ಪಾಳ್ಯದಲ್ಲಿ ವಾಸವಾಗಿದ್ದರು. ಕೋಣನಕಟ್ಟೆಗೆ ಆಗಮಿಸಿದ್ದ ಅವರು ಕಾರ್ಮಿಕರೊಂದಿಗೆ ತೋಟ ನೋಡಲೆಂದು ತೆರಳಿದ್ದ ಸಮಯ ಈ ದುರ್ಘಟನೆ ನಡೆದಿದೆ.
ದಾಳಿಗೆ ಸಿಲುಕಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಸಂಧ್ಯಾ ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ ಕರೆದೊಯ್ಯುವ ಸಮಯ ಮೃತಪಟ್ಟರು. ಅವರ ಪತಿ ಸುನೀಲ್ ಅಚ್ಚಯ್ಯ ನವದೆಹಲಿಯಲ್ಲಿ ಕರ್ತವ್ಯದಲ್ಲಿದ್ದು, ಇನ್ನಷ್ಟೇ ಆಗಮಿಸಬೇಕಾಗಿದೆ.






















