ದಾವಣಗೆರೆ: ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪದಚ್ಯುತ ವಚನಾನಂದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿಯಮಿತ ಜಾಮೀನು (ರೆಗ್ಯುಲರ್ ಬೇಲ್) ಅರ್ಜಿಯ ವಿಚಾರಣೆಯನ್ನು ದಾವಣಗೆರೆಯ ವಿಶೇಷ ಫೋಕ್ಸೋ ನ್ಯಾಯಾಲಯವು ಜು. 3ಕ್ಕೆ ಮುಂದೂಡಿದೆ.
ಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಈ ಹಿಂದೆ ಹೈಕೋರ್ಟ್ ರದ್ದುಗೊಳಿಸಿತ್ತು. ಆದರೆ, ನಿಯಮಿತ ಜಾಮೀನು ಪಡೆದುಕೊಳ್ಳಲು ಹೈಕೋರ್ಟ್ ಸ್ವಾಮೀಜಿಯವರಿಗೆ ಮೂರು ವಾರಗಳ ಕಾಲಾವಕಾಶ ನೀಡಲಾಗಿತ್ತು.
ಈ ಗಡುವು ಮುಗಿಯುವ ಮುನ್ನವೇ, ಇದೇ ತಿಂಗಳ 27 ರಂದು ವಚನಾನಂದ ಸ್ವಾಮೀಜಿಯವರು ಖುದ್ದು ದಾವಣಗೆರೆಯ ವಿಶೇಷ ಫೋಕ್ಸೋ ನ್ಯಾಯಾಲಯಕ್ಕೆ ಹಾಜರಾಗಿ ರೆಗ್ಯುಲರ್ ಬೇಲ್ ಕೋರಿ ಅರ್ಜಿ ಸಲ್ಲಿಸಿದ್ದರು. ಶ್ರೀಗಳು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರ ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಜು. 3ಕ್ಕೆ ಮುಂದೂಡಿದೆ.




















