ಚಿನ್ನ ಅಂದ್ರೆ ಸಾಕು ನಾರಿಯರಿಗೆ ಅಚ್ಚುಮೆಚ್ಚು . ಅದರಲ್ಲೂ ಅಕ್ಷಯ ತೃತೀಯಲ್ಲಿ ಬಂಗಾರ ಖರೀದಿಗೆ ಬೇಡಿಕೆ ಹೆಚ್ಚು, ಆದರೆ ಈ ಬಾರಿ ಚಿನ್ನದ ದರ ಗಗನಕ್ಕೆ ಏರಿರುವುದರಿಂದ ಬಂಗಾರದ ಬೇಡಿಕೆ ಕಡಿಮೆಯಾಗಿದೆ. ಪ್ರತಿ ವರ್ಷ ಅಕ್ಷಯ ತೃತೀಯ ಬಂತು ಎಂದರೆ ಬಹುತೇಕ ಜನರು ನಮಗೆ ಇಂತಹ ಚಿನ್ನದ ಆಭರಣ ಬೇಕು ಎನ್ನುತ್ತಿದ್ದರು. ಅದಲ್ಲದೆ ಮುಂಗಡವಾಗಿ ಹಣ ಪಾವತಿಸುತಿದ್ದರು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಮುಂಗಡ ಬುಕ್ಕಿಂಗ್ನಲ್ಲಿ ಶೇ.25ರಷ್ಟು ಕುಸಿತವಾಗಿದೆ ಎಂದು ವ್ಯಾಪಾರಿಗಳೇ ಹೇಳುತ್ತಿದ್ದಾರೆ.
ಕಳೆದ ವರ್ಷ ಪ್ರತಿ ಗ್ರಾಂಗೆ 7500ರಿಂದ 8 ಸಾವಿರ ರೂಪಾಯಿ ಇತ್ತು. ಈಗ ಅದು 14 ಸಾವಿರದಿಂದ 15 ಸಾವಿರಕ್ಕೆ ಏರಿಕೆಯಾಗಿದೆ. ಅಂದರೆ ಕಳೆದ ವರ್ಷಕ್ಕಿಂತ ದುಪ್ಪಟ್ಟಾಗಿದೆ. ಇದರಿಂದ ಜನಸಾಮಾನ್ಯರು ಚಿನ್ನ ಖರೀದಿಗೆ ಮುಂದಾಗುತ್ತಿಲ್ಲ. ಇಂದು ಒಂದು ಗ್ರಾಂ ಅಪರಂಜಿ ಚಿನ್ನದ ಬೆಲೆ ₹15,529 ಇದೆ. ಇನ್ನು10 ಗ್ರಾಂಗೆ ₹1,55,290 ಇದೆ. ಒಂದು ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹14,235 ಇದ್ದರೆ, 10 ಗ್ರಾಂಗೆ ₹1,42,350 ಇದೆ.
ಇನ್ನು ಬೆಳ್ಳಿ ಬೆಲೆಯೂ ಹೆಚ್ಚಾಗಿದೆ. ಕಳೆದ ವರ್ಷ ಪ್ರತಿ ಗ್ರಾಂಗೆ 100 ರೂ. ಇತ್ತು. ಈಗ 300 ರೂ. ಆಗಿದೆ ಇದರಿಂದ ಬೆಳ್ಳಿಗೂ ಬೇಡಿಕೆ ಸಲ್ಲಿಸಲು ಗ್ರಹಕು ಮುಂದಾಗಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ. ಅಕ್ಷಯ ತೃತೀಯ ಚಿನ್ನ ಖರೀದಿ ಮಾಡುವ ಉದ್ದೇಶದಿಂದ ಬಹುತೇಕರು ಒಂದು ತಿಂಗಳ ಹಿಂದೆಯೇ ತಮಗೆ ಇಷ್ಟವಾದ ಚಿನ್ನದ ಅಂಗಡಿಗಳಿಗೆ ಫೋನ್ ಮಾಡಿ ಇಲ್ಲವೇ ಖುದ್ದು ಭೇಟಿ ನೀಡಿ ಮುಂಗಡವಾಗಿ ಹಣ ಪಾವತಿಸಿ ಹೋಗುತ್ತಿದ್ದರು. ಈ ಭಾರಿ ಬೇಡಿಕೆ ಕಡಿಮೆಯಾಗಿದೆ, ಇದಕ್ಕೆ ಬೆಲೆ ಏರಿಕೆ ಪ್ರಮುಖ ಕಾರಣ. ಈಗ ಬೇಡಿಕೆ ಸಲ್ಲಿಸುವವರೂ ಕಡಿಮೆ ತೂಕದ ಚಿನ್ನಾಭರಣಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಾಗೆಯೆ ಕೆಲವರು ಒಂದು ಗ್ರಾಂ ಚಿನ್ನದ ನಾಣ್ಯ, 5 ಗ್ರಾಂ ಬೆಳ್ಳಿ ನಾಣ್ಯಕ್ಕೆ ಬೇಡಿಕೆ ಸಲ್ಲಿಸಿದ್ದಾರೆ ಎಂದು ಕರ್ನಾಟಕ ಚಿನ್ನಾಭರಣ ಸಂಘದ ಅಧ್ಯಕ್ಷ ಟಿ.ವಿ. ಶರವಣ ಹೇಳುತ್ತಾರೆ.























