Home Advertisement
Home ಸುದ್ದಿ ದೇಶ ರೈಲು ಹಳಿಯಲ್ಲಿ ಸ್ಫೋಟ ಶಂಕೆ – ಶವ ಪತ್ತೆ, ತನಿಖೆ ತೀವ್ರ

ರೈಲು ಹಳಿಯಲ್ಲಿ ಸ್ಫೋಟ ಶಂಕೆ – ಶವ ಪತ್ತೆ, ತನಿಖೆ ತೀವ್ರ

0
133
ಸಾಂದರ್ಭಿಕ ಚಿತ್ರ

ಪಟಿಯಾಲ (ಪಂಜಾಬ್‌) : ಪಟಿಯಾಲ ಜಿಲ್ಲೆಯ ಶಂಭು–ಅಂಬಾಲ ರೈಲು ಹಳಿಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಸ್ಫೋಟ ಘಟನೆ ಆತಂಕಕ್ಕೆ ಕಾರಣವಾಗಿದೆ. ಕಡಿಮೆ ತೀವ್ರತೆಯ ಸ್ಫೋಟದಿಂದ ರೈಲು ಹಳಿ ಹಾನಿಗೊಳಗಾಗಿದ್ದು, ಅದೆ ಸ್ಥಳದ ಸಮೀಪದಲ್ಲೇ ಛಿದ್ರಗೊಂಡ ಸ್ಥಿತಿಯಲ್ಲಿದ್ದ ವ್ಯಕ್ತಿಯ ಶವ ಪತ್ತೆಯಾಗಿದೆ.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ರಾತ್ರಿ ಸುಮಾರು 10 ಗಂಟೆ ವೇಳೆಗೆ ಸರಕು ರೈಲುಗಳಿಗೆ ಮೀಸಲಾಗಿರುವ ಹಳಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ಪರಿಣಾಮ ದೊಡ್ಡ ಮಟ್ಟದ ಹಾನಿ ಅಥವಾ ಇತರ ಗಾಯಗಳಾಗಿಲ್ಲವಾದರೂ, ಘಟನೆಯ ಸ್ವಭಾವದ ಹಿನ್ನೆಲೆ ದೊಡ್ಡ ಪಿತೂರಿ ಶಂಕೆ ವ್ಯಕ್ತವಾಗಿದೆ.

ಅಧಿಕಾರಿಗಳ ಪ್ರಕಾರ, ರಾಜಪುರ ಮತ್ತು ಶಂಭು ನಡುವಿನ ಹಳಿಗಳಲ್ಲಿ ಸ್ಫೋಟದ ಪ್ರಯತ್ನ ನಡೆದಿರುವ ಶಂಕೆ ಇದೆ. ಮೃತದೇಹದ ಬಳಿ ಸಿಮ್ ಕಾರ್ಡ್ ಸೇರಿದಂತೆ ಕೆಲವು ಪುರಾವೆಗಳು ಪತ್ತೆಯಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಶವವು ಛಿದ್ರಗೊಂಡ ಸ್ಥಿತಿಯಲ್ಲಿ ಇದ್ದುದರಿಂದ ಗುರುತು ಪತ್ತೆ ಇನ್ನೂ ಸಾಧ್ಯವಾಗಿಲ್ಲ.

ಘಟನೆಯ ತಕ್ಷಣವೇ ಸರ್ಕಾರಿ ರೈಲ್ವೆ ಪೊಲೀಸ್ (GRP), ರೈಲ್ವೆ ರಕ್ಷಣಾ ಪಡೆ (RPF) ಮತ್ತು ವಿಧಿವಿಜ್ಞಾನ ತಜ್ಞರ ತಂಡಗಳು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿವೆ. ಪಟಿಯಾಲ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಶರ್ಮಾ ಅವರು ಸ್ಫೋಟ ಕಡಿಮೆ ತೀವ್ರತೆಯದ್ದಾಗಿದ್ದು, ಶವದ ಕುರಿತು ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲೂ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಶಿರೋಮಣಿ ಅಕಾಲಿ ದಳ ಹಾಗೂ ಕಾಂಗ್ರೆಸ್ ನಾಯಕರು ಇದನ್ನು ಗಂಭೀರ ಗುಪ್ತಚರ ವೈಫಲ್ಯ ಎಂದು ಆರೋಪಿಸಿ, ರೈಲು ಮೂಲಸೌಕರ್ಯಕ್ಕೆ ಹೆಚ್ಚಿನ ಭದ್ರತೆ ಒದಗಿಸಲು ಆಗ್ರಹಿಸಿದ್ದಾರೆ. ಇತ್ತ ಆಮ್ ಆದ್ಮಿ ಪಾರ್ಟಿ ಸರ್ಕಾರದ ಮೌನದ ಬಗ್ಗೆ ಟೀಕೆಗಳು ಕೇಳಿಬಂದಿವೆ.

ಇತ್ತೀಚಿನ ಮಾಹಿತಿಯ ಪ್ರಕಾರ, ಘಟನಾ ಸ್ಥಳದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ರೈಲು ಸಂಚಾರವನ್ನು ತಾತ್ಕಾಲಿಕವಾಗಿ ನಿಯಂತ್ರಿಸಲಾಗಿದೆ. ಪತ್ತೆಯಾದ ಸಿಮ್ ಕಾರ್ಡ್ ಆಧಾರವಾಗಿ ಸಂಪರ್ಕ ಜಾಲದ ಬಗ್ಗೆ ತನಿಖೆ ಮುಂದುವರಿದಿದ್ದು, ಉಗ್ರ ಚಟುವಟಿಕೆ ಕೋನದಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.