Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರಲ್ಲಿ ಶಾಸಕರ ಹೆಸರೇಳಿ ಸಿಬ್ಬಂದಿ ಮೇಲೆ ದರ್ಪ; ಟೋಲ್ ಶುಲ್ಕ ಕಟ್ಟದೇ BMW, ಫಾರ್ಚೂನರ್‌ನಲ್ಲಿ ಪರಾರಿ

ಬೆಂಗಳೂರಲ್ಲಿ ಶಾಸಕರ ಹೆಸರೇಳಿ ಸಿಬ್ಬಂದಿ ಮೇಲೆ ದರ್ಪ; ಟೋಲ್ ಶುಲ್ಕ ಕಟ್ಟದೇ BMW, ಫಾರ್ಚೂನರ್‌ನಲ್ಲಿ ಪರಾರಿ

0
42

ಬೆಂಗಳೂರು: ರಾಜಧಾನಿಯ ಉತ್ತರ ಭಾಗದ ರಾಜಾನುಕುಂಟೆ ಸಮೀಪದ ಕಡತನಮಲೆ ಟೋಲ್ ಗೇಟ್‌ನಲ್ಲಿ ಭೀಕರ ಘಟನೆಯೊಂದು ನಡೆದಿದೆ. ಟೋಲ್ ಶುಲ್ಕ ಪಾವತಿಸಲು ನಿರಾಕರಿಸಿದ ದುಷ್ಕರ್ಮಿಗಳ ಗುಂಪೊಂದು, ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಓರ್ವನನ್ನು ಅಪಹರಿಸಿದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.

ಶುಕ್ರವಾರ ಮುಂಜಾನೆ ದೊಡ್ಡಬಳ್ಳಾಪುರ ಕಡೆಯಿಂದ ಬಂದ BMW (KA-51 MR-7090) ಮತ್ತು ಟೊಯೋಟಾ ಫಾರ್ಚೂನರ್ ಕಾರುಗಳು ಕಡತನಮಲೆ ಟೋಲ್ ಪ್ಲಾಜಾ ತಲುಪಿದ್ದವು. ಈ ವೇಳೆ ಕರ್ತವ್ಯದಲ್ಲಿದ್ದ 18 ವರ್ಷದ ದ್ರುವ ಎಂಬ ಸಿಬ್ಬಂದಿ ಟೋಲ್ ಶುಲ್ಕ ಪಾವತಿಸುವಂತೆ ಕೇಳಿದ್ದಾರೆ. ಇದರಿಂದ ಕೆರಳಿದ ಕಾರಿನಲ್ಲಿದ್ದ ಮೂವರು ವ್ಯಕ್ತಿಗಳು, “ನಮ್ಮ ಬಳಿ ಫಾಸ್ಟ್‌ಟ್ಯಾಗ್ ಆಗಲಿ, ನಗದಾಗಲಿ ಇಲ್ಲ” ಎಂದು ಉದ್ಧಟತನ ಪ್ರದರ್ಶಿಸಿದ್ದಾರೆ.

ಶಾಸಕರ ಹೆಸರಿನಲ್ಲಿ ದರ್ಪ: ತಮಗೆ ಸ್ಥಳೀಯ ಶಾಸಕರ ಪರಿಚಯವಿದೆ ಎಂದು ಹೇಳಿಕೊಂಡ ಆರೋಪಿಗಳು, ಬಲವಂತವಾಗಿ ತಡೆಗೋಡೆಯನ್ನು ದಾಟಲು ಯತ್ನಿಸಿದ್ದಾರೆ. ಇದನ್ನು ಪ್ರಶ್ನಿಸಿದ ದಾವಣಗೇರೆ ಮೂಲದ 18 ವರ್ಷದ ಹುಡುಗ ದ್ರುವನ ಮುಖಕ್ಕೆ ಹೊಡೆದು, ಕಾಲಿನಿಂದ ಒದ್ದು ದೌರ್ಜನ್ಯ ಎಸಗಿದ್ದಾರೆ. ಈ ವೇಳೆ ಸಹೋದ್ಯೋಗಿಯ ರಕ್ಷಣೆಗೆ ಬಂದ ದೀಕ್ಷಿತ್ ಎಂಬುವವರನ್ನು ಆರೋಪಿಗಳು ಬಲವಂತವಾಗಿ ಬಿಎಂಡಬ್ಲ್ಯೂ ಕಾರಿನೊಳಗೆ ಎಳೆದುಕೊಂಡು ಅಪಹರಿಸಿದ್ದಾರೆ. ಚಲಿಸುತ್ತಿದ್ದ ಕಾರಿನಲ್ಲೇ ದೀಕ್ಷಿತ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಗ್ಯಾಂಗ್, ಸ್ವಲ್ಪ ದೂರದ ನಂತರ ರಸ್ತೆಗೆ ತಳ್ಳಿ ಪರಾರಿಯಾಗಿದ್ದಾರೆ.

ಪೊಲೀಸ್ ತನಿಖೆ ಚುರುಕು: ದ್ರುವ ನೀಡಿದ ದೂರಿನ ಮೇರೆಗೆ ರಾಜಾನುಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (BNS) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ಘಟನೆಯ ಸಂಪೂರ್ಣ ದೃಶ್ಯಗಳು ಟೋಲ್ ಗೇಟ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಅಧಿಕಾರ ಮತ್ತು ಹಣದ ಬಲ ಪ್ರದರ್ಶಿಸಿ ಕಾನೂನು ಕೈಗೆತ್ತಿಕೊಂಡಿರುವ ಈ ಕಿಡಿಗೇಡಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಕಾರಿನ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಟೋಲ್ ಸಿಬ್ಬಂದಿಗಳ ಸುರಕ್ಷತೆಯ ಬಗ್ಗೆ ಮತ್ತೆ ಆತಂಕ ಮೂಡಿಸಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.