ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿಯ ಚೋರ್ಲಾ ಘಾಟ್ನಲ್ಲಿ ನಡೆದ ಸುಮಾರು 400 ಕೋಟಿ ರೂ ಮೌಲ್ಯದ ರದ್ದಾದ ನೋಟುಗಳ ದರೋಡೆ ಪ್ರಕರಣ ಇದೀಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ.
ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಸಾಳ್ವೆ ಬಂಧನಕ್ಕೊಳಗಾಗಿದ್ದು, ಈ ಮೂಲಕ ದರೋಡೆ ಜಾಲದ ಆಂತರಿಕ ಮುಖವಾಡ ತೆಗೆಯುವ ನಿರೀಕ್ಷೆ ಹೆಚ್ಚಾಗಿದೆ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಘೋಟಿ ಪೊಲೀಸ್ ಠಾಣೆಗೆ ಸ್ವಯಂ ಶರಣಾದ ಕಿಶೋರ್ ಸಾಳ್ವೆಯನ್ನು ಪೊಲೀಸರು ತಕ್ಷಣ ವಶಕ್ಕೆ ಪಡೆದಿದ್ದಾರೆ.
ಈ ಬಂಧನದೊಂದಿಗೆ, ಪ್ರಕರಣದಲ್ಲಿ ಇದುವರೆಗೆ ಒಟ್ಟು ಎಂಟು ಮಂದಿ ಆರೋಪಿಗಳು ಬಂಧಿತರಾಗಿದ್ದಾರೆ. ಪ್ರಕರಣದ ಗಂಭೀರತೆ ಮನಗಂಡಿರುವ ಮಹಾರಾಷ್ಟ್ರ ಸರ್ಕಾರ, ತನಿಖೆಯನ್ನು ಯಾವುದೇ ಒತ್ತಡವಿಲ್ಲದೆ ಕಟ್ಟುನಿಟ್ಟಾಗಿ ಮುಂದುವರಿಸಲು ಸೂಚನೆ ನೀಡಿದೆ.
ದೇಶವ್ಯಾಪಿ ಸಂಚಲನ: ಈ ಪ್ರಕರಣದ ಬೇರುಗಳು 2025ರ ಅಕ್ಟೋಬರ್ 25ರಂದು ಚೋರ್ಲಾ ಘಾಟ್ನಲ್ಲಿ ನಡೆದ ಘಟನೆಯಲ್ಲಿವೆ. ಎರಡು ಕಂಟೇನರ್ಗಳಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 400 ಕೋಟಿ ನಗದು ಹಣ ದರೋಡೆ ಮಾಡಲಾಗಿದೆ ಎಂದು ಸಂದೀಪ್ ಪಾಟೀಲ್ ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ ಬಳಿಕ, ಪ್ರಕರಣ ದೇಶದಾದ್ಯಂತ ಸಂಚಲನ ಮೂಡಿಸಿತ್ತು.
ದೂರುದಾರರ ಪ್ರಕಾರ, ದರೋಡೆಯಾದ ಹಣವು ಗುಜರಾತ್ ಮೂಲದ ಬಿಲ್ಡರ್ ಕಿಶೋರ್ ಸವಲಾ ಸೇಠ್ ಅವರಿಗೆ ಸೇರಿದ್ದು, ಅದರಲ್ಲಿಯೇ ರದ್ದಾದ 2,000 ಮುಖಬೆಲೆಯ ನೋಟುಗಳೂ ಸೇರಿದ್ದವು ಎನ್ನಲಾಗಿದೆ.






















